ಬೆಂಗಳೂರು,ಜ.30-ಸಚಿವ ಸಂಪುಟ ವಿಸ್ತರಣೆ ಜೊತೆ ಪುನರ್ ರಚನೆಗೂ ಕೈ ಹಾಕಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹಾಲಿ ಐದು ಸಚಿವರಿಗೆ ಕೋಕ್ ನೀಡುವ ಸಾಧ್ಯತೆ ಹೆಚ್ಚಾಗಿದೆ.
ತಮಗೆ ನೀಡಿರುವ ಖಾತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ವಿಫಲರಾಗಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೆಸರುಗಳು ಕೇಳಿಬರುತ್ತಿದೆ.
ಒಂದು ವೇಳೆ ಪುನಾರಚನೆಯಾದರೆ ಯಲಬುರ್ಗದ ಹಾಲಪ್ಪ ಆಚಾರ್, ಬಿಳಗಿಯ ಮುರುಗೇಶ್ ನಿರಾಣಿ, ಸುರಪುರದ ರಾಜುಗೌಡ ನಾಯಕ್, ವಿರಾಜಪೇಟೆಯ ಕೆ.ಜಿ.ಬೋಪಯ್ಯ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.ಸದನದಲ್ಲಿ ವಿರೋಧ ಪಕ್ಷದವರನ್ನು ಸಮರ್ಪಕವಾಗಿ ಎದುರಿಸಲು ಮಾಧುಸ್ವಾಮಿ ಮತ್ತು ಬಸವರಾಜ್ ಬೊಮ್ಮಾಯಿ ಅಗತ್ಯವಾಗಿರುವುದರಿಂದ ಈ ಇಬ್ಬರನ್ನು ಸಂಪುಟದಿಂದ ಕೈಬಿಡಲು ಬಿಎಸ್ವೈ ಮನಸ್ಸು ಸುತಾರಾಂ ಒಪ್ಪುತ್ತಿಲ್ಲ.