ಬೆಂಗಳೂರು: ಹೈಕಮಾಂಡ್ ಬುಲಾವ್ ಮೇರೆಗೆ ಇಂದು (ಗುರುವಾರ) ದೆಹಲಿಗೆ ತೆರಳುತ್ತಿದ್ದೇನೆ. ಯಾವ ವಿಚಾರದ ಕುರಿತು ಕರೆದಿದ್ದಾರೆ ಎಂದು ಅಲ್ಲಿಗೆ ಹೋದ ನಂತರವೇ ತಿಳಿಯಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಬುಧವಾರ ಮಾತನಾಡಿದ ಅವರು, ದೆಹಲಿ ಕಚೇರಿಯಿಂದ ಕರೆ ಬಂದಿತ್ತು. ಹಾಗಾಗಿ, ಗುರುವಾರ ದೆಹಲಿಗೆ ಹೋಗುತ್ತಿದ್ದೇನೆ. ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ಪಿ.ಸಿ.ಮೋಹನ್ ಅವರನ್ನೂ ಕರೆದಿದ್ದಾರೆ. ನಾವು ಮೂವರು ಹೋಗಲಿದ್ದೇವೆ ಎಂದರು.
ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಅವರಿಗೆ ಯಾವಾಗ ಏನು ಮಾಡಬೇಕು ಅಂತ ಗೊತ್ತು. ಅವರು ಬುದ್ಧಿವಂತರು. ಅವರಿಗೆ ಎಲ್ಲವೂ ತಿಳಿದಿದೆ. ಅವರೇ ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.
ಆಪರೇಷನ್ ಕಮಲ ನಡೆಯುತ್ತಿದೆ ಎಂಬ ಆರೋಪ ಮಾಡಲಾಗುತ್ತಿದೆ. ಇಂತಹ ಸುಳ್ಳು ಆರೋಪ ಮಾಡುವುದಕ್ಕೇ ಸಿದ್ದರಾಮಯ್ಯ ಅವರನ್ನು ಸುಳ್ಳುಗಾರ ಅಂತ ಹೇಳೋದು. ರಾತ್ರೋರಾತ್ರಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟ ಡಿ.ಕೆ.ಶಿವಕುಮಾರ್ ಅವರನ್ನು ಕಳ್ಳ ಅಂತಾರೆ. ಒಬ್ಬರನ್ನು ಕಳ್ಳ, ಮತ್ತೊಬ್ಬರನ್ನು ಸುಳ್ಳ ಅಂದ್ರೆ ಸಿಟ್ಟು ಮಾಡಿಕೊಳ್ತಾರೆ. ಆದರೆ, ನಾನು ಹೇಳ್ತಿಲ್ಲ ಜನ ಮಾತಾಡ್ತಿದ್ದಾರೆ. ಇವರು ಪ್ರತಿದಿನ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಅವರ ಶಾಸಕರಿಗೆ 50 ಕೋಟಿ ರೂಪಾಯಿ ಕೊಡೋಕೆ ನಮಗೆ ಗ್ರಹಚಾರವೇ?, ಒಬ್ಬನನ್ನು ಕರೆತಂದು ಸರ್ಕಾರ ಮಾಡುವುದಕ್ಕೆ ಆಗುತ್ತಾ?. ಇದೆಲ್ಲಾ ಸುಳ್ಳಲ್ಲದೆ ಮತ್ತೇನು ಎಂದು ಆಪರೇಷನ್ ಆರೋಪಕ್ಕೆ ತಿರುಗೇಟು ಕೊಟ್ಟರು.
ಕಾಂಗ್ರೆಸ್ ಹೈಕಮಾಂಡ್ ರಾಜ್ಯಕ್ಕೆ ಆಗಮಿಸಿದೆ. ಆಂತರಿಕ ಸಮಸ್ಯೆ ಬಗೆಹರಿಸಲು ಯತ್ನಿಸುತ್ತಿದ್ದಾರೆ. ಆದರೆ, ಯಾವ ವಿಚಾರವನ್ನೂ ಅವರು ಬಗೆಹರಿಸಿಲ್ಲ. ಅವರು ಕೇಳಿದಷ್ಟು ಇವರು ಕೊಟ್ಟಿಲ್ಲ. ಹಾಗಾಗಿ ಕಲೆಕ್ಷನ್ ಕೊಡಿ ಅಂತ ಬಂದಿದ್ದಾರೆ. ಐದು ರಾಜ್ಯದ ಚುನಾವಣೆ ಬಂದಿದೆ. ಅದಕ್ಕೆ ಬೇಗ ಕಲೆಕ್ಷನ್ ಕೊಡಿ ಅಂತ ಬಂದಿದ್ದಾರೆ. ಹೇಳೋದು ಕರೆಕ್ಷನ್ ಮಾಡಲು ಬಂದಿದ್ದೇವೆ ಅಂತ, ಮಾಡೋದು ಮಾತ್ರ ಕಲೆಕ್ಷನ್ ಎಂದು ವೇಣುಗೋಪಾಲ್, ಸುರ್ಜೇವಾಲ ರಾಜ್ಯ ಭೇಟಿಯನ್ನು ಈಶ್ವರಪ್ಪ ಟೀಕಿಸಿದರು.