ತುಮಕೂರು: ರಾಜ್ಯದಲ್ಲಿ ಸೈಬರ್ ಪ್ರಕರಣಗಳು ಹೆಚ್ಚಾಗ್ತಿದ್ದು, ಇಂಥ ಪ್ರಕರಣಗಳ ತಡೆಗೆ ಎಚ್ಚರಿಕೆ ವಹಿಸ್ತಿದ್ದೇವೆ. ಇದಕ್ಕಾಗಿ ಹೋಂ ಡಿಪಾರ್ಟ್ಮೆಂಟ್ ಹಾಗೂ ಐಟಿ ಡಿಪಾರ್ಟ್ಮೆಂಟ್ ಸೇರಿ ಒಂದು ಹೊಸ ಸಮಿತಿ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆಯಂಟಿ ಸೈಬರ್ ಕಾನೂನು ಜಾರಿಗೆ ತರಲು ಒಂದು ಅಜೆಂಡಾ ರೂಪಿಸಲು ಜವಾಬ್ದಾರಿ ಕೊಟ್ಟಿದ್ದಾರೆ.ನಾವು ಸದ್ಯದಲ್ಲೇ ಅದನ್ನ ಪ್ರಕಟಣೆ ಮಾಡ್ತೀವಿ. ಸೈಬರ್ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ನಿತ್ಯ ಸಾವಿರಾರು ಪ್ರಕರಣಗಳು ದಾಖಲಾಗ್ತಿವೆ. ಇನ್ಮೇಲೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಹೆಚ್ಚು ಸೈಬರ್ ಪ್ರಕರಣಗಳೇ ಆಗ್ತಿವೆ ಎಂದು ತಿಳಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಅವುಗಳನ್ನು ನಿಯಂತ್ರಣ ಮಾಡಲು ಕಾನೂನುಗಳು ಅಷ್ಟೊಂದು ಬಲಿಷ್ಠವಾಗಿಲ್ಲ. ಅದಕ್ಕಾಗಿ ನಾವೊಂದು ಹೊಸ ಸೈಬರ್ ನೀತಿಯನ್ನು ತರ್ತಿದ್ದೇವೆ ಎಂದು ತಿಳಿಸಿದರು.
200 ತಾಲೂಕು ಬರಪೀಡಿತ ಪ್ರದೇಶ: ರಾಜ್ಯದಲ್ಲಿ ಬರ ನಿರ್ವಹಣೆ ವಿಚಾರದಲ್ಲಿ ಈಗಾಗಲೇ ರಾಜ್ಯ ಸರ್ಕಾರವು ರಾಜ್ಯದಲ್ಲಿ ಇರುವ ಒಟ್ಟು 226 ತಾಲೂಕುಗಳಲ್ಲಿ 200 ತಾಲೂಕು ಬರಪೀಡಿತ ಪ್ರದೇಶ ಅಂತ ಘೋಷಣೆ ಮಾಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ 10 ತಾಲೂಕುಗಳಲ್ಲಿ 1 ತಾಲೂಕನ್ನು ಮಾತ್ರ ಪರಿಗಣಿಸಿರಲಿಲ್ಲ. ಈಗ 10 ತಾಲೂಕುಗಳನ್ನ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ ಎಂದರು.
ಬರ ಎದುರಿಸಲು 550 ಕೋಟಿ ಹಣ ಡಿಸಿಗಳ ಖಾತೆಗೆ ಜಮೆ: ನಮಗೆ ಹಣಕಾಸಿನ ಕೊರತೆಯಂತೂ ಸದ್ಯಕ್ಕೆ ಇಲ್ಲ. ಈಗಾಗಲೇ 19 ಕೋಟಿ ಹಣವನ್ನು ಜಿಲ್ಲಾಧಿಕಾರಿ ಅಕೌಂಟ್ಗೆ ಹಾಕಲಾಗಿದೆ. ಆ ಹಣವನ್ನು ಯಾವುದಕ್ಕೆ ಬಳಸಬೇಕು ಎಂಬ ಸೂಚನೆ ಸಹ ನೀಡಲಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಗುಳೆ ಹೋಗುವಂತಹವರಿಗೆ ಕೆಲಸ ಒದಗಿಸುವ ಕಾರ್ಯಕ್ಕೆ ಹಣ ಮೀಸಲಿಡಲಾಗಿದೆ. ಸುಮಾರು 550 ಕೋಟಿ ಹಣ ಎಲ್ಲ ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಯಲ್ಲಿದೆ. ಕೇಂದ್ರ ಸರ್ಕಾರದಿಂದ ಇನ್ನು ಯಾವುದೇ ನೆರವು ಬಂದಿಲ್ಲ ಎಂದು ತಿಳಿಸಿದರು.
36 ಸಾವಿರ ಕೋಟಿ ನಷ್ಟ: ಕೇಂದ್ರದ ಅಧಿಕಾರಿಗಳ ತಂಡವು ರಾಜ್ಯದಲ್ಲಿ ಬಂದು ಪರಿಶೀಲನೆ ಮಾಡಿಕೊಂಡು ಹೋಗಿದೆ. ಹಸಿರು ಚೆನ್ನಾಗಿದೆ ಅಂತ ಅವರು ವರದಿ ಬರೆದುಕೊಂಡು ಹೋಗಿದ್ದಾರೆ. ಅವರ ಕಣ್ಣಿಗೆ ಬರ ಕಾಣಿಸಿಲ್ಲ, ನಮ್ಮ ಕಣ್ಣಿಗೆ ಬರ ಕಾಣಿಸ್ತಿದೆ ಎಂದು ವ್ಯಂಗ್ಯವಾಡಿದರು. ಸುಮಾರು 36 ಸಾವಿರ ಕೋಟಿ ನಷ್ಟ ಆಗಿದೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿ ಬರದ ಛಾಯೆ ಕಾಣಿಸುತ್ತಿದೆ. ಶೇ 65ರಷ್ಟು ಪ್ರದೇಶದಲ್ಲಿ ಮಳೆ ಆಗಿಲ್ಲ ಎಂದರು.