ಬೆಂಗಳೂರು: ಪ್ರತಿವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ. ಮೈಸೂರು ರಾಜ್ಯವು ಈಗಿನ ಕರ್ನಾಟಕ 1956ರ ನವೆಂಬರ್ 1ರಂದು ಏಕೀಕರಣವಾಗಿದ್ದು, ಇದರ ಸಂಕೇತವಾಗಿ ರಾಜ್ಯೋತ್ಸವ ಆಚರಿಸುತ್ತೇವೆ. ರಾಜ್ಯ ಸರ್ಕಾರ ಕೂಡ ಈ ವರ್ಷ ಕನ್ನಡ ರಾಜ್ಯೋತ್ಸವವನ್ನು ಮನೆ ಮನೆಗಳಲ್ಲಿ ರಂಗೋಲಿ ಹಾಗೂ ದೀಪಗಳನ್ನು ಹಚ್ಚುವ ಮೂಲಕ ಅದ್ಧೂರಿಯಾಗಿ ಆಚರಿಸುವಂತೆ ಮನವಿ ಮಾಡಿದೆ.
ವಿಶಾಲ ಮೈಸೂರು ರಾಜ್ಯಕ್ಕೆ ನವೆಂಬರ್ 1, 1973ರಂದು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು. ಈ ಕುರಿತು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಈಟಿವಿ ಭಾರತ ಜೊತೆಗೆ ಕನ್ನಡ ಭಾಷೆ ಎಷ್ಟರ ಮಟ್ಟಿಗೆ ಬೆಳವಣಿಗೆ ಆಗಿದೆ ಅನ್ನೋ ವಿಚಾರವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ಯಾವುದೇ ರಾಜ್ಯದಲ್ಲಿ ಕೂಡ ರಾಜ್ಯದ ಉತ್ಸವ ಅನಿವಾರ್ಯ. ಅದೇ ರೀತಿ ರಾಜ್ಯದ ಉತ್ಸವ ಮಾಡಬೇಕು ಎಂಬ ನಿಯಮವಿಲ್ಲ. ಆದರೆ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ರಾಜ್ಯೋತ್ಸವವನ್ನು ಒತ್ತಿ ಒತ್ತಿ ಹೇಳಬೇಕಿದೆ. ಕನ್ನಡವನ್ನು ಮರೀಬೇಡಿ ಎಂದು ಹೇಳುವ ಪರಿಸ್ಥಿತಿ ಬಂದಿದೆ. ಇವತ್ತಿಗೂ ಕನ್ನಡ ಕನ್ನಡೀಕರಣವಾಗಿಲ್ಲ. 50 ವರ್ಷಗಳ ಹಿಂದೆ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮುದ್ರೆ ಒತ್ತಿದರು. ಆಗ ಕಾಲದಲ್ಲಿ ದೊಡ್ಡ ಮಟ್ಟದ ಹೋರಾಟ ಕೂಡ ಆಗಿತ್ತು. ಅವತ್ತಿನ ಕಾಲ ಘಟ್ಟದಲ್ಲಿ ಸಮಸ್ಯೆಗಳಿಗೆ ಬಗೆ ಹರಿಸುವ ಕೆಲಸ ನಡೆಯುತ್ತಿತ್ತು. ಇದೆಲ್ಲ ರಾಜಕೀಯ ಕಾರಣಕ್ಕೋ ಏನೋ ಗೊತ್ತಿಲ್ಲ. ನಾವು ಕನ್ನಡದ ಹೆಸರು ಇಟ್ಟುಕೊಂಡಿದ್ವಿ. ಆದರೆ ಕನ್ನಡ ಅಷ್ಟೊಂದು ಅಭಿವೃದ್ದಿ ಆಗಿಲ್ಲ. ನಮ್ಮ ಭಾಷೆ ನಮ್ಮದು ಎಂಬ ಅಭಿಮಾನ ಯಾರಲ್ಲೂ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ತಮಿಳುನಾಡು, ಮಹಾರಾಷ್ಟ್ರ ಹಾಗೂ ತೆಲುಗು ರಾಜ್ಯಗಳನ್ನು ಉದಾಹರಣೆಗೆ ತೆಗೆದುಕೊಂಡರೆ, ಅಲ್ಲಿ ಭಾಷಾಭಿಮಾನ ಜಾಸ್ತಿ ಇದೆ. ಆದರೆ ಕರ್ನಾಟಕದಲ್ಲಿ ಇರುವವರಿಗೆ ಭಾಷಾಭಿಮಾನವಿಲ್ಲ. ಕರ್ನಾಟಕದಲ್ಲಿ ಹುಟ್ಟಿರುವವರು ಹಾಗೂ ಹೊರಗಡೆಯಿಂದ ವಲಸೆ ಬಂದವರು ಇಲ್ಲಿ ಕನ್ನಡ ಕಲಿಯದೇ ಇದ್ದರೂ ನಾನು ಬದುಕಬಲ್ಲೆ ಎಂಬ ಮನೋಭಾವ ಬೆಳೆದಿದೆ. ಇಡೀ ದೇಶವನ್ನು ಒಡೆಯುವ ಕೆಲಸ ನಾನು ಮಾಡುವುದಿಲ್ಲ. ಯಾಕಂದ್ರೆ ವಿಭಿನ್ನ ಭಾಷೆ ವಿಭಿನ್ನ, ಸಂಸ್ಕೃತಿಗಳ ಪದ್ದತಿ ನಮ್ಮ ದೇಶ. ಹೀಗಿರಬೇಕಾದರೆ, ಸಂವಿಧಾನದ ಆಧಾರದ ಮೇಲೆ ಭಾಷೆಯನ್ನು ವಿಂಗಡಣೆ ಮಾಡಿದ್ದೀರಿ. ಕನ್ನಡ ಮಾತನಾಡಲು ತೊಂದರೆ, ಕೆಲಸ ಕೊಡುವುದರಲ್ಲಿ ತೊಂದರೆ, ಶಿಕ್ಷಣದಲ್ಲಿ ತೊಂದರೆ ನಮ್ಮಲ್ಲಿದೆ. ನಮ್ಮ ಮಾತೃ ಭಾಷೆ ಮೊದಲು. ಆ ಮಾತೃಭಾಷೆ ಕೂಡ ಶಿಕ್ಷಣದಲ್ಲೇ ಆಗಬೇಕು ಅಂತ ಗಾಂಧೀಜಿ ಹೇಳಿದ್ದಾರೆ. ಆದ್ರೆ ಅದು ಆಗುತ್ತಿಲ್ಲ. ಅವತ್ತಿನ ಕಾಲಘಟ್ಟಕ್ಕೆ ರಾಜಕೀಯದವರು ಮಾಡಿರುವ ದೊಡ್ಡ ಯಡವಟ್ಟು” ಎಂದರು.