ರಾಯಗಡ(ಮಹಾರಾಷ್ಟ್ರ) : ಸೂಪರ್ಹಿಟ್ ಚಿತ್ರಗಳನ್ನು ನೀಡಿದ್ದ ಕಲಾ ನಿರ್ದೇಶಕ ನಿತಿನ್ ಚಂದ್ರಕಾಂತ್ ದೇಸಾಯಿ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲಿಸರು, ನೇಣು ಬಿಗಿದುಕೊಂಡಿದ್ದೇ ಕಾರಣ ಎಂದಿದ್ದಾರೆ.
ಇತ್ತ ಅವರ ಕುಟುಂಬಸ್ಥರು ದೇಸಾಯಿ ಅವರು ಆತ್ಮಹತ್ಯೆ ಮಾಡಿಕೊಂಡ ಸ್ಟುಡಿಯೋದಲ್ಲೇ ಅಂತ್ಯಕ್ರಿಯೆ ನಡೆಸುವುದಾಗಿ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಖ್ಯಾತ ಕಲಾ ನಿರ್ದೇಶಕ ದೇಸಾಯಿ ಅವರು ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅವರು ಆಗಸ್ಟ್ 2 ರಂದು ಬುಧವಾರ ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಅವರದ್ದೇ ಎನ್ಡಿ ಸ್ಟುಡಿಯೋದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಸಿನಿಮಾ ರಂಗವನ್ನು ದಿಗ್ಭ್ರಮೆಗೊಳಿಸಿತ್ತು.
ಮರಣೋತ್ತರ ಪರೀಕ್ಷೆ: ಬಾಲಿವುಡ್ ಕಲಾ ನಿರ್ದೇಶಕ ನಿತಿನ್ ಚಂದ್ರಕಾಂತ್ ದೇಸಾಯಿ ಅವರ ಮರಣೋತ್ತರ ಪರೀಕ್ಷೆಯನ್ನು ನಾಲ್ವರು ವೈದ್ಯರ ತಂಡ ಬುಧವಾರ ನಡೆಸಿತು. ಪ್ರಾಥಮಿಕ ವರದಿಯಲ್ಲಿ ಪ್ರಕಾರ, ಸಾವಿಗೆ ನೇಣು ಬಿಗಿದುಕೊಂಡಿದ್ದೇ ಕಾರಣ ಎಂದು ತಿಳಿದುಬಂದಿದೆ. ನಿರ್ದೇಶಕರ ಮೃತದೇಹವನ್ನು ಖಲಾಪುರ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಜೆಜೆ ಆಸ್ಪತ್ರೆಗೆ ತಂದಿದ್ದರು.
ನಿತಿನ್ ದೇಸಾಯಿ ಅವರು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಅವರ ಎನ್ಡಿ ಸ್ಟುಡಿಯೋದಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದು ಹಲವು ಅನುಮಾನಗಳನ್ನು ಹುಟ್ಟಿಸಿದ್ದವು. ಹೀಗಾಗಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ನೇಣು ಹಾಕಿಕೊಂಡ ಕಾರಣ ಉಸಿರುಗಟ್ಟಿ ಸಾವಾಗಿದೆ ಎಂದಿದೆ.