Breaking News

ರಕ್ಕಸ ಮಳೆಗೆ ಬೆಂಗಳೂರಿನಲ್ಲಿ 10 ಬಲಿ – ಅಮ್ಮನ ಮುಂದೆಯೇ ಪ್ರಾಣ ಬಿಟ್ಟ 17 ವರ್ಷದ ಮಗ

Spread the love

ಬೆಂಗಳೂರು: ಬೇಸಿಗೆಗೆ ಬೆಂದಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ, ಹಲವು ಅವಘಡಗಳ ಜೊತೆ 10 ಜನರ ಪ್ರಾಣವನ್ನು ತೆಗೆದಿದೆ. ಒಂದೇ ಜಾಗದಲ್ಲಿ 7 ಜನ ಗೋಡೆ ಕುಸಿದು ಅಸುನೀಗಿದ್ರೆ, ಉಳಿದ ಮೂವರು ಪ್ರತ್ಯೇಕ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಅಬ್ಬರಿಸಿದ್ದ ಬಿಸಿಲಿನ ಬೇಗೆಗೆ ವರುಣ  ತಂಪೆರೆದ ಅಂತ ನಿಟ್ಟುಸಿರು ಬಿಡುವಷ್ಟರಲ್ಲೇ, ಹಲವು ಮನೆಗಳ ನಂದಾದೀಪವೇ ಆರಿಹೋಗಿವೆ. ಅರ್ಧ ಗಂಟೆ ಸುರಿದ ಮಳೆಗೆ ನಗರದಲ್ಲಿ ಪ್ರತ್ಯೇಕ ಘಟನೆಗಳಲ್ಲಿ 10 ಜನ ಅಸುನೀಗಿದ್ದಾರೆ.

ಹೌದು, ಬೆಂಗಳೂರಿನ ಶಿವಾಜಿನಗರದ  ಬೌರಿಂಗ್ ಆಸ್ಪತ್ರೆ ಶವಗಾರದ ಬಳಿ ಕಾಂಪೌಂಡ್ ಕುಸಿದು 7 ಜನ ಮೃತಪಟ್ಟಿದ್ದಾರೆ. ದುರಂತ ಅಂದರೆ ಘಟನೆಯಾದ 100 ಮೀಟರ್ ದೂರದಲ್ಲಿ ಗಾಡಿ ಪಾರ್ಕ್ ಮಾಡುತ್ತಿದ್ದ 17 ವರ್ಷದ ಸೈಯದ್ ಸೂಫಿಯಾನ್, ಗೋಡೆ ಕುಸಿದ ಕಾರಣ ಬೆಸ್ಕಾಂ ವಿದ್ಯುತ್ ವೈಯರ್ ತಾಗಿ ಕರೆಂಟ್ ಶಾಕ್‌ನಿಂದ ಪ್ರಾಣ ಬಿಟ್ಟಿದ್ದಾನೆ. ಕೆಜಿ ಹಳ್ಳಿಯ ವೆಂಕಟೇಶ್ ಪುರಂ ನಿವಾಸಿ ಸೈಯದ್ ತನ್ನ ತಾಯಿ ಜೊತೆ ಖುಷಿಯಿಂದ ಬಟ್ಟೆ ಖರೀದಿಗೆ ಬಂದಿದ್ದ. ತಾಯಿ ಜೊತೆ ಬಂದಾತ ಪಾರ್ಕ್ ಮಾಡಲು ಹೋದಾಗ ಬೌರಿಂಗ್ ಆಸ್ಪತ್ರೆ ಶವಗಾರದ ಬಳಿ ಕಾಂಪೌಂಡ್ ಕುಸಿದಿದೆ. ಇದೇ ವೇಳೆ ದೂರದ ಬೆಸ್ಕಾಂ ಕಂಬಕ್ಕೆ ಹಾನಿಯಾಗಿ ವೈಯರ್ ಕಟ್ ಆಗಿದ್ದು, ಪಾರ್ಕ್ ಮಾಡುತ್ತಿದ್ದ ಸೈಯದ್‌ಗೆ ವಿದ್ಯುತ್ ತಂತಿ ತಗುಲಿ ಶಾಕ್‌ನಿಂದ ತಾಯಿ ಮುಂದೆಯೇ ಸೈಯದ್ ಪ್ರಾಣ ಬಿಟ್ಟಿದ್ದಾನೆ. ತನ್ನ ಕಣ್ಣ ಮುಂದೆಯೇ ನಡೆದ ದುರಂತ ಕಂಡ ತಾಯಿ ಕೂಡ ಮಗನ ಸಾವಿನಿಂದ ಶಾಕ್‌ಗೆ ಒಳಗಾಗಿ ಐಸಿಯು ಸೇರಿದ್ದಾರೆ.

ಇನ್ನೂ ಮಳೆಗೆ ಮತ್ತೊಂದು ಪ್ರಕರಣದಲ್ಲಿ ಗೋಡೋನ್ ಶೀಟ್‌ಗಳು ಬಿದ್ದು ವ್ಯಕ್ತಿ ದುರಂತ ಸಾವನ್ನಪ್ಪಿದ್ದಾರೆ. ಮೈಸೂರು ರಸ್ತೆ ಕಸ್ತೂರಿ ಬಾಯಿನಗರ ಅಶ್ವಥ್ ಕಟ್ಟೆ ರಸ್ತೆಯ ಮನೆಯಲ್ಲಿದ್ದ 35 ವರ್ಷದ ಮಂಜು ಮೇಲೆ ಸಿಮೆಂಟ್ ಶೀಟ್ ಬಿದ್ದಿದೆ. ಕುಟುಂಬದ ಜೊತೆ ಮನೆ ಒಳಗೆ ಇದ್ದ ವ್ಯಕ್ತಿ ಸಾವನ್ನಪ್ಪಿದ್ದು, ಬಿರುಗಾಳಿ ಮಳೆಗೆ ಗೋಡೌನ್ ಶೀಟ್‌ಗಳು ಹಾರಿ ಮನೆಗಳ ಮೇಲೆ ಬಿದ್ದು, ಹಲವು ಮನೆಗಳು, ಗೋಡೌನ್‌ಗಳಿಗೆ ಹಾನಿಯಾಗಿದೆ.

ಇನ್ನೂ ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಮಳೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ನಗರದ ಮಿನಿ ಫಾರೆಸ್ಟ್, 15ನೇ ಕ್ರಾಸ್ ಬಳಿ ಮಳೆಗೆ ಮತ್ತೊಂದು ಬಲಿಯಾಗಿದೆ. 35 ವರ್ಷದ ರಘು ಸಾವನ್ನಪ್ಪಿರುವ ದುರ್ದೈವಿ. ಸಾರಕ್ಕಿ ಬಸ್ ನಿಲ್ದಾಣದ ಬಳಿ ವಿದ್ಯುತ್ ಕಂಬದ ಬಳಿ ನಿಂತಿದ್ದಾಗ, ಜೆಡಿ ಮಾರಾ ಸ್ಲಂ ನಿವಾಸಿ ರಘು ವಿದ್ಯುತ್ ಸ್ಪರ್ಶಿಸಿ ಸಾವುನ್ನಪ್ಪಿದ್ದಾರೆ.

ಒಟ್ಟಾರೆ ನಗರದಲ್ಲಿ ಬುಧವಾರ ಬರೊಬ್ಬರಿ 111 ಮಿ.ಮೀ ಮಳೆಯಾಗಿದ್ದು, ಇದು ಕಳೆದ 25 ವರ್ಷದಲ್ಲಿ ದಾಖಲಾದ ಹೆಚ್ಚಿನ ಮಳೆಯಾಗಿದೆ. 2001ರಲ್ಲಿ 118 ಮಿ.ಮೀ ಮಳೆಯಾಗಿದ್ದು, ಈಗ ದಾಖಲೆ ಮಳೆಯೊಂದಿಗೆ 10 ಜನರ ಬಲಿ ಕೂಡ ಪಡೆದಿದೆ.


Spread the love

About Laxminews 24x7

Check Also

ಇಂದಿರಾ ಗಾಂಧಿ ಇದ್ದಿದ್ರೆ ಬಿಜೆಪಿ ಬ್ಯಾನ್ ಮಾಡ್ತಿದ್ರು: ವಿವಾದ ಸೃಷ್ಟಿಸಿದ ಅಶೋಕ್ ಗೆಹ್ಲೋಟ್ ಹೇಳಿಕೆ

Spread the loveಜೈಪುರ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಇಂದು ಬದುಕಿದ್ದರೆ ಬಿಜೆಪಿಯನ್ನು ಬ್ಯಾನ್ ಮಾಡಿರುತ್ತಿದ್ದರು ಎಂಬ ರಾಜಸ್ಥಾನದ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ