Breaking News
Home / ರಾಷ್ಟ್ರೀಯ / ಅಮ್ಮಾ ಎದ್ದೇಳು ಎಂದು ಕಣ್ಣೀರಿಟ್ಟ ಮಗಳು- ಅಪ್ಪನ ಮಡಿಲಲ್ಲಿ ಕಂದನ ಸಾವು-ಬದುಕಿನ ಹೋರಾಟ

ಅಮ್ಮಾ ಎದ್ದೇಳು ಎಂದು ಕಣ್ಣೀರಿಟ್ಟ ಮಗಳು- ಅಪ್ಪನ ಮಡಿಲಲ್ಲಿ ಕಂದನ ಸಾವು-ಬದುಕಿನ ಹೋರಾಟ

Spread the love

ವಿಶಾಖಪಟ್ಟಣಂ: ‘ಅಮ್ಮಾ ಎದ್ದೇಳು,  ಅಮ್ಮಾ ಎದ್ದೇಳು’… ‘ಪಾಪು ನಿನಗೇನೂ ಆಗಲ್ಲ, ಕಣ್ಣು ಬೀಡೋ, ಎದ್ದೇಳೋ’ ಎಂದು ನೂರಾರು ಮಕ್ಕಳು-ಪೋಷಕರು ಕಣ್ಣೀರಿಟ್ಟರು. ಅಮ್ಮನನ್ನ ಹಿಡಿದು ಮಗಳು ಗೋಳೋ ಅಂತ ಅತ್ತಳು. ಅಂಗೈಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಕಂದಮ್ಮನ ಸ್ಥಿತಿ ಕಂಡು ಅಪ್ಪ ಅಸಹಾಯಕರಂತೆ ಚಡಪಡಿಸಿದ ಮನಕಲುಕುವ ದೃಶ್ಯಗಳು ವಿಶಾಖಪಟ್ಟಣಂನಲ್ಲಿ ಕಂಡು ಬಂದವು.

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಕಾರ್ಖಾನೆಯಿಂದ ಗುರುವಾರ ನಸುಕಿನ ಜಾವ ಅನಿಲ ಸೋರಿಕೆಯಾಗಿದೆ. ಎಲ್‍ಜಿ ಪಾಲಿಮರ್ಸ್ ಇಂಡಸ್ಟ್ರಿಯ ಸ್ಥಾವರದಲ್ಲಿ 2:30 ಗಂಟೆಗೆ ಅಪಘಾತ ಸಂಭವಿಸಿದ್ದು, ಬೆಳಗ್ಗೆ 5:30ರ ಸುಮಾರಿಗೆ ನ್ಯೂಟ್ರಾಲೈಜರ್ ಗಳನ್ನು ಬಳಸಿದ ನಂತರ ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದಿತು. ಅಷ್ಟೊತ್ತಿಗೆ ಅನಿಲವು 4 ಕಿ.ಮೀ ವ್ಯಾಪ್ತಿಯಲ್ಲಿ 5 ಸಣ್ಣ ಹಳ್ಳಿಗಳಿಗೆ ಹರಡಿತ್ತು. ಅಪಘಾತದಲ್ಲಿ ಈವರೆಗೆ 2 ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿದ್ದಾರೆಎನ್‍ಡಿಆರ್‌ಎಫ್, ಎಸ್‍ಡಿಆರ್‌ಎಫ್, ಎನ್‍ಡಿಎಂಎ ಮತ್ತು ನೌಕಾಪಡೆಯ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿದವು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎನ್‍ಡಿಆರ್‌ಎಫ್ ಡಿಜಿ ಎಸ್‍ಎನ್ ಪ್ರಧಾನ್ ಹೇಳಿದ್ದಾರೆ

ವಿಶಾಖಪಟ್ಟಣಂನಿಂದ 30 ಕಿ.ಮೀ ದೂರದಲ್ಲಿರುವ ವೆಂಕಟಪುರಂ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಪರಿಣಾಮ ಸಾವಿರಕ್ಕೂ ಹೆಚ್ಚು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. 300 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 25 ಜನರು ವೆಂಟಿಲೇಟರ್ ಗಳಲ್ಲಿದ್ದಾರೆ. 15 ಮಕ್ಕಳ ಸ್ಥಿತಿ ಗಂಭೀರವಾಗಿದೆ.

ಪರಿಸ್ಥಿತಿ ಎಷ್ಟರ ಮಟ್ಟಿಗೆ ಕರಾಳವಾಗಿತ್ತು ಎಂದರೆ ಮೃತ 11 ಜನರಲ್ಲಿ ಇಬ್ಬರು ಭಯದಿಂದಲೇ ಪ್ರಾಣಬಿಟ್ಟಿದ್ದಾರೆ. ಓರ್ವ ಕಂಪನಿಯ ಎರಡನೇ ಮಹಡಿಯಿಂದ ಬಿದ್ದರೆ, ಇನ್ನೊಬ್ಬ ಬಾವಿಗೆ ಹಾರಿ ಸಾವನ್ನಪ್ಪಿದ್ದಾನೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಜನರು ಮಕ್ಕಳು, ವೃದ್ಧರನ್ನು ಕರೆದುಕೊಂಡು ಗ್ರಾಮವನ್ನು ಬಿಡಲು ಆರಂಭಿಸಿದರು. ಆದರೆ ಅನೇಕರು ಮಾರ್ಗಮಧ್ಯದಲ್ಲೇ ಪ್ರಜ್ಞೆ ತಪ್ಪಿದರು. ಕೆಲವರು ಚರಂಡಿಗೆ ಬಿದ್ದರೆ, ಇನ್ನೂ ಕೆಲವರು ಬೈಕ್ ನಿಯಂತ್ರಣ ಕಳೆದುಕೊಂಡು ನಡುರಸ್ತೆಯಲ್ಲೇ ಬಿದ್ದಿದ್ದರು.

 

ಕಾರ್ಖಾನೆಯ ಸುತ್ತಲೂ ಗೊಂದಲ ನಿರ್ಮಾಣವಾಗಿತ್ತು. ಜನರು ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡುತ್ತಿದ್ದರು. ಪೊಲೀಸರು, ಭದ್ರತಾ ಸಿಬ್ಬಂದಿ ಜನರ ಸಹಾಯಕ್ಕೆ ನಿಂತರು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ತಮ್ಮ ಜೀವ ಉಳಿಸಲು ಪ್ರಯತ್ನಿಸುತ್ತಿದ್ದರು. ಅನೇಕ ಜನರು ತಲೆತಿರುಗಿ ನೆಲಕ್ಕೆ ಬಿದ್ದಿದ್ದರು.

Embedded video

ರಸ್ತೆ ಪಕ್ಕದಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ತಾಯಿ ನೋಡಿ ಮಗಳು ಕಣ್ಣೀರಾದಳು. ಅಮ್ಮಾ ಎದ್ದೇಳು… ಏಳ್ ಅಮ್ಮಾ ಎಂದು ಹಿಡಿದು ತಾಯಿಯನ್ನ ಎಚ್ಚರಗೊಳಿಸಲು ಯತ್ನಿಸಿದಳು. ಬಳಿಕ ವಿಷವನ್ನು ಕಕ್ಕುವಂತೆ ಎದೆಯನ್ನು ಒತ್ತಿ ಕಣ್ಣೀರಿಟ್ಟಳು. ಆಗ ಪ್ರಜ್ಞೆ ತಪ್ಪಿ ಬಿದ್ದಿದ್ದ ತಾಯಿ ಎಚ್ಚರಗೊಂಡಳು.

ಮತ್ತೊಂದು ಕಡೆ ತಂದೆಯೊಬ್ಬ ತನ್ನ ಪುಟ್ಟ ಮಗುವನ್ನು ಅಂಗೈಯಲ್ಲಿ ಹಿಡಿದು ಕಣ್ಣೀರಿಡುತ್ತಿದ್ದ. ‘ಏ ಎದ್ದೇಳೋ… ಲೇ ಪುಟ್ಟಾ ನಿಮಗೆ ಏನೂ ಆಗಲ್ಲ’ ಎಂದು ಧೈರ್ಯ ಹೇಳುತ್ತ ಮಗುವನ್ನು ಹಿಡಿದು ಅಂಬುಲೆಂನ್ಸ್ ಹತ್ತಿ ಆಸ್ಪತ್ರೆಗೆ ಸಾಗಿದರು.

Embedded video

1984ರ ಡಿಸೆಂಬರ್ 3ರಂದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‍ನಲ್ಲಿರುವ ಅಮೆರಿಕನ್ ಕಂಪನಿ ಯೂನಿಯನ್ ಕಾರ್ಬೈಡ್‍ನ ಕಾರ್ಖಾನೆಯಲ್ಲಿ 42 ಸಾವಿರ ಕೆಜಿ ವಿಷಕಾರಿ ಅನಿಲ ಸೋರಿಕೆಯಾಗಿತ್ತು. ಈ ಘಟನೆಯಲ್ಲಿ 3,500 ಜನರು ಬಲಿಯಾಗಿದ್ದರು ಎಂದು ಸರ್ಕಾರ ತಿಳಿಸಿತ್ತು. ಆದರೆ ಈ ಅಪಘಾತದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಎಂದು ಹೇಳಲಾಗಿದೆ.

Embedded video


Spread the love

About Laxminews 24x7

Check Also

ರಾಜ್ಯದ ನರೇಗಾ ಕಾರ್ಮಿಕರಿಗೆ ಮೋದಿ ಸರ್ಕಾರ ವೇತನ ನೀಡುವುದು ಯಾವಾಗ: ಪ್ರಧಾನಿಗೆ ಕಾಂಗ್ರೆಸ್ ಪ್ರಶ್ನೆ

Spread the loveಬೆಂಗಳೂರು: ಕರ್ನಾಟಕದಲ್ಲಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ