ಬೆಂಗಳೂರು: ಗ್ಯಾರಂಟಿ ಯೋಜನೆ ಪರಿಷ್ಕರಣೆಗೆ ಮುಂದಾಗಿರೋ ಸರ್ಕಾರದ ಕ್ರಮಕ್ಕೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ನಿಖಿಲ್, ಸತ್ಯ ಕೊನೆಗೂ ಹೊರಗೆ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸತ್ಯ ಕೊನೆಗೂ ಹೊರಬಂದಿದೆ. ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಿಗೆ ಸಂಪೂರ್ಣವಾಗಿ ಮರುಅರ್ಜಿ ಸಲ್ಲಿಸಲು ಸಿಎಂ ಡಿಕೆ ಶಿವಕುಮಾರ್ ಅವರು ನೀಡಿರುವ ಆದೇಶ, ಕಳೆದ 3 ವರ್ಷಗಳ ಸಿದ್ದರಾಮಯ್ಯ ಅವರ ನೇತೃತ್ವದ ಆಡಳಿತದ ಮಹಾವೈಫಲ್ಯಕ್ಕೆ ಅವರದ್ದೇ ಸರ್ಕಾರ ನೀಡಿದ ಅಧಿಕೃತ ಸಾಕ್ಷಿಯಾಗಿದೆ.
ಯೋಜನೆಗಳ ಉಸ್ತುವಾರಿ ಹೆಸರಿನಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲಿದ್ದ 4,580 ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕರ 23.32 ಕೋಟಿ ರೂ. ತೆರಿಗೆ ಹಣವನ್ನು ಸಂಬಳದ ರೂಪದಲ್ಲಿ ಲೂಟಿ ಮಾಡಿದ್ದನ್ನು ಬಿಟ್ಟರೆ ಸಾಧಿಸಿದ್ದಾದರೂ ಏನು?
ಸ್ವಪಕ್ಷದ ಕಾರ್ಯಕರ್ತರ ಜೇಬು ತುಂಬಿಸಲು ಜನರ ಹಣ ಪೋಲು ಮಾಡಿ, ಈಗ ಹಗಲಿರುಳು ದುಡಿಯುವ ಜನಸಾಮಾನ್ಯರನ್ನು ಮತ್ತೆ ಕ್ಯೂ ನಿಲ್ಲಿಸುತ್ತಿರುವುದು ಈ ಸರ್ಕಾರದ ಆಡಳಿತ ದುರಂತಕ್ಕೆ ಹಿಡಿದ ಕೈಗನ್ನಡಿ.
ಮಾನ್ಯ ಮುಖ್ಯಮಂತ್ರಿಗಳು ಕೇವಲ ಮರು ಅರ್ಜಿಗೆ ಆದೇಶಿಸಿಲ್ಲ. ಬದಲಿಗೆ ಹಿಂದಿನ ಸಿಎಂ ಸಿದ್ದರಾಮಯ್ಯ ಅವರ ಆಡಳಿತ ವೈಫಲ್ಯಕ್ಕೆ ಅವರೇ ಅಧಿಕೃತವಾಗಿ ನೀಡಿದ ‘ಪ್ರಗತಿ ಪತ್ರ’ ಇದಾಗಿದೆ, ಸಂಪೂರ್ಣ ವೈಫಲ್ಯ ಎಂದು ಹರಿಹಾಯ್ದಿದ್ದಾರೆ.
ಇನ್ನು ಗ್ಯಾರಂಟಿ ಪರಿಷ್ಕರಣೆಗೆ ಮುಂದಾಗಿರೋ ಸರ್ಕಾರದ ನಡೆಗೆ ಜೆಡಿಎಸ್ ಕಿಡಿಕಾರಿದೆ. ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರೋ ಜೆಡಿಎಸ್, ಗ್ಯಾರಂಟಿಗಳ ಅಸಲಿಯತ್ತು ಕೊನೆಗೂ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ಗಳ ಅಸಲಿಯತ್ತು ಕೊನೆಗೂ ಬಯಲಾಗಿದೆ. ಗ್ಯಾರಂಟಿ ಯೋಜನೆಗಳ ಉಸ್ತುವಾರಿ ಹೆಸರಿನಲ್ಲಿ ನಡೆದ ಹಗರಣ ಮತ್ತು ಹಿಂದಿನ ಕಾಂಗ್ರೆಸ್ ಆಡಳಿತದ ‘ಮಹಾವೈಫಲ್ಯ’ವನ್ನು ಈಗಿನ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ.
ಗ್ಯಾರಂಟಿ ಸಮಿತಿ ಅನುಷ್ಠಾನ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಬಳದ ರೂಪದಲ್ಲಿ 23.32 ಕೋಟಿ ರೂ. ಲೂಟಿ ಮಾಡಲಾಗಿದೆ. ನಾಡಿನ ಜನರ ತೆರಿಗೆ ಹಣವನ್ನು ತಮ್ಮ ಪಕ್ಷದ ಕಾರ್ಯಕರ್ತರ ಜೇಬಿಗಿಳಿಸಿ, ಈಗ ಗ್ಯಾರಂಟಿ ಪರಿಷ್ಕರಣೆ ನೆಪವೊಡ್ಡಿ ಜನರನ್ನು ಬೀದಿಗೆ ತಳ್ಳುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದೆ.
Laxmi News 24×7