ಮಂಡ್ಯ: ಜಿಲ್ಲೆಯ ಕೆ.ಆರ್. ಪೇಟೆ ಪಟ್ಟಣದಲ್ಲಿ ಮಾನವೀಯತೆಯನ್ನೇ ಮರೆತು ನಡೆಯುತ್ತಿದ್ದ ಭೀಕರ “ಭ್ರೂಣ ಹತ್ಯೆ” ಮತ್ತು “ಲಿಂಗ ಪತ್ತೆ” ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪುರುಷ ವೈದ್ಯರು ಹಾಗೂ ಓರ್ವ ಮಹಿಳಾ ವೈದ್ಯೆಯನ್ನು ಬಂಧಿಸಲಾಗಿದ್ದು, ಇಡೀ ವೈದ್ಯಕೀಯ ಲೋಕವೇ ತಲೆತಗ್ಗಿಸುವಂತಾಗಿದೆ.
ಖೆಡ್ಡಾಕ್ಕೆ ಬಿದ್ದ ಕಿಲಾಡಿ ವೈದ್ಯರು!
ಲೋಕಾಯುಕ್ತ ಪೊಲೀಸರು ಹಾಗೂ ಕೆ.ಆರ್.ಪೇಟೆ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಈ ದಂಧೆಯ ಅಸಲಿ ಮುಖವಾಡ ಕಳಚಿಬಿದ್ದಿದೆ. ಬಂಧಿತರ ವಿವರ ಇಲ್ಲಿದೆ:
ಡಾ. ದಿವ್ಯಚೇತನಾ (ಚೇತನ ಮೆಟರ್ನಿಟಿ ಸೆಂಟರ್)
ಡಾ. ವೈ.ಆರ್. ಹರ್ಷಿತ್ (ನಾವಿ ಡಯಾಗ್ನೋಸ್ಟಿಕ್ ಸೆಂಟರ್)
ಡಾ. ಹರೀಶ್ (ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್)
ಪ್ರಕರಣದ ಮತ್ತೋರ್ವ ಆರೋಪಿ ಡಾ. ಪ್ರಿಯಾಂಕಾ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಆಕೆಗಾಗಿ ಬಲೆ ಬೀಸಿದ್ದಾರೆ.
ಸರ್ಕಾರಿ ಯಂತ್ರಗಳ ಅಕ್ರಮ ಬಳಕೆ!
ಸಾರ್ವಜನಿಕ ಸೇವೆಯಲ್ಲಿದ್ದ ಇವರು, ಸರ್ಕಾರಿ ಆಸ್ಪತ್ರೆಗಳ ಸ್ಕ್ಯಾನಿಂಗ್ ಯಂತ್ರಗಳನ್ನು ಅಕ್ರಮವಾಗಿ ತಮ್ಮ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ಗಳಿಗೆ ಸಾಗಿಸಿ, ಅಲ್ಲಿ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಉಪ ಲೋಕಾಯುಕ್ತ ಬಿ. ವೀರಪ್ಪ ಅವರ ಆದೇಶದ ಮೇರೆಗೆ ನಡೆದ ದಾಳಿಯಲ್ಲಿ ಈ ರಹಸ್ಯ ಬಯಲಾಗಿದೆ.
ಫೋಕ್ಸೋ ಕಾಯ್ದೆಯಡಿ ಪ್ರಕರಣ: ಶಾಕಿಂಗ್ ಅಂಕಿಅಂಶ!
ತನಿಖೆಯ ವೇಳೆ ಲಭ್ಯವಾದ ಮಾಹಿತಿ ಮತ್ತಷ್ಟು ಆತಂಕಕಾರಿಯಾಗಿದೆ:
ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ 18 ವರ್ಷಕ್ಕಿಂತ ಕೆಳಗಿನ 7 ಹೆಣ್ಣು ಮಕ್ಕಳಿಗೆ ಸ್ಕ್ಯಾನಿಂಗ್ ಮಾಡಲಾಗಿದೆ.
ಸುಮಾರು 64 ಪ್ರಕರಣಗಳಲ್ಲಿ ವಯಸ್ಸಿನ ದಾಖಲೆ ಪಡೆಯದೆ ಅಕ್ರಮವಾಗಿ ಸ್ಕ್ಯಾನಿಂಗ್ ನಡೆಸಲಾಗಿದೆ.
ಬಂಧಿತರ ಮೇಲೆ POCSO (ಫೋಕ್ಸೋ) ಮತ್ತು ಭಾರತೀಯ ನ್ಯಾಯ ಸಂಹಿತೆಯಡಿ ಒಟ್ಟು 12 ಕಠಿಣ ಮೊಕದ್ದಮೆಗಳನ್ನು ಹೂಡಲಾಗಿದೆ.
ಜನರ ಆಕ್ರೋಶ:
”ವೈದ್ಯರು ದೇವರ ಸಮಾನ” ಎಂಬ ನಂಬಿಕೆಯನ್ನು ಈ ಮೂವರು ಹಣದಾಸೆಗೆ ಬಲಿ ಕೊಟ್ಟಿದ್ದಾರೆ. ಹೆಣ್ಣು ಭ್ರೂಣಗಳನ್ನು ಹತ್ಯೆ ಮಾಡಲು ಸಾಥ್ ನೀಡಿದ ಈ ವೈದ್ಯರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಹೆಣ್ಣು ಮಗು ಉಳಿಸಿ, ಭ್ರೂಣ ಹತ್ಯೆ ತಡೆಯಿರಿ! ಇಂತಹ ಅಕ್ರಮ ಕಂಡರೆ ಕೂಡಲೇ ದೂರು ನೀಡಿ.
Laxmi News 24×7