ನೇಸರಗಿ: ಬಿ.ಎಸ್.ಸಿ ಪದವಿ ಪಡೆದಿದ್ದರೂ ಸರ್ಕಾರ ನೌಕರಿಗಾಗಿ ಅಲೆದಾಡದೇ, ತಮ್ಮ ಹೊಲದಲ್ಲಿ ಕೃಷಿ ಕಾಯಕದಲ್ಲಿ ತೊಡಗಿಕೊಂಡ ಈ ಯುವಕ ಈಗ ಲಾಭದಾಯಕ ಕೃಷಿ ಮಾಡುತ್ತಿದ್ದಾರೆ.
ಬೈಲಹೊಂಗಲ ತಾಲ್ಲೂಕಿನ ಸಂಪಗಾಂವ ಗ್ರಾಮದ ರವೀಂದ್ರ ಬಸಪ್ಪ ಶಿದ್ನಾಳ 15 ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
ತಮ್ಮ 25 ಎಕರೆ ಹೊಲದಲ್ಲಿ ಸದ್ಯ ಕಬ್ಬು, ಸೇವಂತಿ ಹೂವು, ಚೆಂಡು ಹೂವು ಬೆಳೆದಿದ್ದಾರೆ. ಸೌತೆಕಾಯಿ, ಕಡಲೆ, ಜೋಳ, ಟೊಮೆಟೊ, ಮೆಣಶಿನಕಾಯಿ, ಕ್ಯಾಬೀಜ್, ಕುಂಬಳಕಾಯಿ ಕೂಡ ಅವರ ಕೈ ಹಿಡಿದಿವೆ.
ಸೇವಂತಿ ಹೂವು, ಚೆಂಡು ಹೂವುಗಳನ್ನು ಎರಡು ಎಕೆರಯಲ್ಲಿ ಬೆಳೆದಿದ್ದು ಸೇವಂತಿ ಹೂವಿನಿಂದ ₹ 80 ಸಾವಿರ ಲಾಭ ಮಾಡಿಕೊಂಡಿದ್ದಾರೆ. ಚೆಂಡು ಹೂವಿನಿಂದ ₹ 1.80 ಲಕ್ಷದಷ್ಟು ಗಳಿಕೆ ಮಾಡಿದ್ದಾಗಿ ಅವರು ಹೇಳುತ್ತಾರೆ.
10 ಎಕರೆ ಪ್ರದೇಶದಲ್ಲಿ ಕಬ್ಬು ಬೇಸಾಯ ಮಾಡಿದ್ದಾರೆ. ಜತೆಗೆ, ಒಂದು ಎಕರೆಗೆ 9 ಕ್ವಿಂಟಲ್ ಸೋಯಾಬಿನ್ ಬೆಳೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಕಬ್ಬಿನ ಗದ್ದೆತಲ್ಲಿ ಕೊತ್ತಂಬರಿ, ಸೌತೆಕಾಯಿ, ಕೋಳದ ಹೊದಲ್ಲಿ ಕಡಲೆ ಹೀಗೆ ಮಿಶ್ರ ಬೇಸಾಯ ಮಾಡಿದ್ದು ಅವರ ಕೈ ಹಿಡಿದಿದೆ. ಕಬ್ಬಿನ ಗದ್ದೆಯಲ್ಲಿ ಕೊತ್ತಂಬರಿ ಬೆಳೆಯುವುದರಿಂದ ಕಬ್ಬಿಗೆ ತಗುಲುವ ಗೊಣ್ಣೆಹುಳು ಬಾಧೆ ನಿಲ್ಲುತ್ತದೆ. ಇದೇ ರೀತಿ ಒಂದಕ್ಕೆ ಒಂದು ಬೆಳೆ ಸಹಯಾರಿಯಾಗುತ್ತವೆ ಎನ್ನುತ್ತಾರೆ ರೈತ ರವೀಂದ್ರ ಶಿದ್ನಾಳ.
‘ಈ ಹಿಂದೆ ಎರಡು ಆಕಳು ಸಾಕಿದ್ದೇವು. ನಂತರ 12 ಆಕಳುಗಳನ್ನು ಸಾಕಿ ಉತ್ತಮ ಆದಾಯ ಮಾಡಿದ್ದೇನೆ. ಇದರಿಂದ ವರ್ಷಕ್ಕೆ 10 ರಿಂದ 12 ಟ್ರ್ಯಾಕ್ಟರ್ ತಿಪ್ಪೆ ಗೊಬ್ಬರವೂ ಸಿಗುತ್ತದೆ. ಸಾಕಷ್ಟು ಆಕಳುಗಳನ್ನು ಸಾಕಿದ್ದರಿಂದ ಅದರಿಂದ ಬಂದ ಆದಾಯದಲ್ಲಿ ನಾನು ಕೃಷಿಗೆ ಮಾಡಿದ ಸಾಲವೂ ಮುಟ್ಟಿತು. ನನಗೆ ಆರ್ಥಿಕವಾಗಿ ಸಾಕಷ್ಟು ಬಲವನ್ನು ತಂದುಕೊಟ್ಟು ಇದೀಗ ಆರ್ಥಿಕವಾಗಿ ಸದೃಢವಾಗಲೂ ಕಾರಣವಾಯಿತು’ ಎನ್ನುತ್ತಾರೆ ಈ ರೈತ.
ಪ್ರಶಸ್ತಿಗಳು: 2020-21ರಲ್ಲಿ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ, 2018-19ರಲ್ಲಿ ಬೆಳಗಾವಿ ಕೃಷಿ ಇಲಾಖೆಯಿಂದ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ, 2018-19ರಲ್ಲಿ ಫಲ- ಪುಷ್ಪ ಪ್ರದರ್ಶನದಲ್ಲಿ ತರಕಾರಿ ಕುಂಬಳಕಾಯಿಗೆ 2ನೇ ಸ್ಥಾನದ ಬಹುಮಾನ ಪಡೆದಿದ್ದಾರೆ. ಪ್ರಸಕ್ತ ವರ್ಷ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಕರುಗಳ ಪ್ರದರ್ಶನದಲ್ಲಿ ಮಿಶ್ರತಳಿ ಆಕಳು ಪ್ರದರ್ಶಿಸಿ ಬಹುಮಾನ ಪಡೆದಿದ್ದಾರೆ.