ಸಚಿವ ಸ್ಥಾನದಿಂದ ಮಹೇಶ ಕುಮಟಳ್ಳಿ ಔಟ್, ಉಮೇಶ ಕತ್ತಿ ಇನ್?
ಡಿಸಿಎಂ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ
ಬೆಂಗಳೂರು: ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು,ಉಪ ಚುನಾವಣೆಯಲ್ಲೆ ಗೆದ್ದ 11 ಶಾಸಕರ ಪೈಕಿ 10 ಜನ ಶಾಸಕರಿಗೆ ಸಚಿವ ಸ್ಥಾನ ಫಿಕ್ಸ್ ಆಗಿದೆ. ಆದ್ರೆ ಅಥಣಿ ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಸಚಿವ ಸ್ಥಾನದಿಂದ ಕೋಕ್ ನೀಡಲಾಗಿದೆ ಎನ್ನಲಾಗುತ್ತಿದೆ.
ಹೌದು … ಈಗಾಗಲೇ ಅಥಣಿ ಕ್ಷೇತ್ರದಿಂದ ಲಕ್ಷ್ಮಣ ಸವದಿ ಅವರು ಡಿಸಿಎಂ ಇರುವ ಕಾರಣದಿಂದ ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡದಿರಲು ಹೈಕಮಾಂಡ್ ನಿರ್ಧರಿಸಿದೆ. ಒಂದೇ ಕ್ಷೇತ್ರದಿಂದ ಇಬ್ಬರು ಸಚಿವರನ್ನು ನೇಮಕ ಮಾಡುವುದು ಸರಿಯಲ್ಲ ಎಂಬ ಕಾರಣದಿಂದ ಮಹೇಶ ಕುಮಟಳ್ಳಿ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಹಿಂದೆ ಕಾಗವಾಡ ಮತ್ತು ಅಥಣಿ ಕ್ಷೇತ್ರದ ಇಬ್ಬರು ಶಾಸಕರಿಗೂ ಸಚಿವ ಸ್ಥಾನದಿಂದ ಕೋಕ್ ನೀಡಲಾಗುತ್ತದೆ ಎಂಬ ವದಂತಿ ಹರಿದಾಡುತ್ತಿತ್ತು. ಆದ್ರೆ ಕೊನೆ ಕ್ಷಣದಲ್ಲಿ ಶ್ರೀಮಂತ ಪಾಟೀಲ್ ಅವರಿಗೆ ಅವಕಾಶ ನೀಡಲಾಗಿದೆಯಂತೆ.
10 ಪ್ಲಸ್ 3 ಸೂತ್ರದ ಆಧಾರದ ಮೇಲೆ ಸಂಪುಟ ವಿಸ್ತರಣೆ..!
ಉಪ ಚುನಾವಣೆಯಲ್ಲಿ ಗೆದ್ದ 11 ಜನ ಶಾಸಕರ ಪೈಕಿ 10 ಶಾಸಕರಿಗೆ ಸಚಿವ ಸ್ಥಾನ ಒಲಿದು ಬರಲಿದೆ. ಜತೆಗೆ ಮೂಲ ಬಿಜೆಪಿಗರಲ್ಲಿ ಭಿನ್ನಮತ ಮೂಡ ಬಾರದು ಎಂದು ಮೂವರು ಹಿರಿಯ ಶಾಸಕರಿಗೆ ಮನೆ ಹಾಕಲಿದೆ. ಮಹೇಶ ಕುಮಟಳ್ಳಿ ಬದಲಿಗೆ ಹುಕ್ಕೇರಿ ಶಾಸಕ ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ಒಲಿಯಲಿದೆ ಕತ್ತಿ ಜತೆಗೆ ಶಾಸಕ ರಾಮದಾಸ್ ಮತ್ತು ಅರವಿಂದ ಲಿಂಬಾವಳಿ ಅವರಿಗೂ ಸಚಿವ ಸ್ಥಾನ ದೊರೆಯುವ ನಿರೀಕ್ಷೆ ಇದೆ.
ಡಿಸಿಎಂ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ..!
ಈಗಿರುವ ಮೂರು ಉಪ ಮುಖ್ಯಮಂತ್ರಿಗಳನ್ನು ಮುಂದುವರೆಸಲಾಗುವುದು. ಹೊಸದಾಗಿ ಡಿಸಿಎಂ ಹುದ್ದೆ ರಚಿಸಲಾಗಲ್ಲ ಅಂತಾ ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದು, ಡಿಸಿಎಂ ಹುದ್ದೆ ನಿರೀಕ್ಷೆಯಲ್ಲಿದ್ದ ಸಚಿವ ಶ್ರೀರಾಮುಲು ಸೇರಿ ಹಲವರು ನಾಯಕರ ಆಸೆಗೆ ಹೈಕಮಾಂಡ್ ಎಳ್ಳು ನೀರು ಬಿಟ್ಟಿದೆ.
ಯಾವ ಕ್ಷಣದಲ್ಲಿಯೂ ಸಂಪುಟ ರಚನೆಗೆ ಅವಕಾಶ ಸಿಕ್ಕಿದೆ ಎಂದು ಸಿಎಂ ಹೇಳಿದ್ದು, ಯಾವ ಶಾಸಕರಿಗೆ ಅದೃಷ್ಟ ಕುಲಾಯಿಸಲಿದೆ ಎಂದು ಕಾದುನೋಡಬೇಕಿದೆ.