2ನೇ ಅವಧಿಗೆ ಸಿಎಂ ಆಗಿ ಯೋಗಿ ಇಂದು ಪ್ರಮಾಣ ವಚನ
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನತ್ತ ಮುನ್ನಡೆಸಿದ ಯೋಗಿ ಎರಡನೇ ಅವಧಿಗೆ ಸಿಎಂ ಆಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಲಖನೌನದಲ್ಲಿ ನಡೆಯಲಿರುವ ಅದ್ದೂರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಬಿಜೆಪಿ ಆಡಳಿತದ ಮುಖ್ಯಮಂತ್ರಿಗಳು, ಮುಖೇಶ್ ಅಂಬಾನಿ ಸೇರಿದಂತೆ ಹಲವು ಉದ್ಯಮಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಿಎಂ ಬೊಮ್ಮಾಯಿ ಕೂಡ ಭಾಗಿಯಾಗಲಿದ್ದಾರೆ.
ಸ್ವಗ್ರಾಮದಲ್ಲಿ ಸಿದ್ದರಾಮಯ್ಯ ‘ವೀರ’ ಕುಣಿತ
ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ 40 ನಿಮಿಷಗಳ ಕಾಲ ಸ್ಟೆಪ್ ಹಾಕಿ ಗ್ರಾಮಸ್ಥರನ್ನ ಮನರಂಜಿಸಿದ್ದಾರೆ. ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮೇಶ್ವರ ಜಾತ್ರೆ ಅದ್ಧೂರಿಯಾಗಿ ನೆರವೇರಿತ್ತು. ಈ ವೇಳೆ ವೀರ ಕುಣಿತಕ್ಕೆ ಸಿದ್ದರಾಮಯ್ಯ ಕುಣಿದು ಕುಪ್ಪಳಿಸಿದ್ದಾರೆ. ಸಿದ್ದರಾಮಯ್ಯ ಈ ಮುಂಚೆ ಮಂತ್ರಿ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಆದಾಗಲೂ ಸ್ವಗ್ರಾಮಕ್ಕೆ ಬಂದು ತನ್ನ ಗೆಳಯರೊಂದಿಗೆ ಕುಣಿದು ಕುಪ್ಪಳಿಸಿದ್ದರಂತೆ. ಇನ್ನು ಅಪ್ಪನ ಕುಣಿತ ನೋಡಿದ ಪುತ್ರ ಶಾಸಕ ಡಾ.ಯತೀಂದ್ರ ಸಂತಸಗೊಂಡಿದ್ದಾರೆ.
ಭಾರತದಲ್ಲಿಂದು ಚೀನಾ ಸಚಿವರ ಮಹತ್ವದ ಚರ್ಚೆ..!
ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನವದೆಹಲಿಗೆ ಆಗಮಿಸಿದ್ದಾರೆ. ವಾಂಗ್ ಯಿ ಇಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಇಂದು ಭೇಟಿಯಾಗುವ ಸಾಧ್ಯತೆಯಿದೆ. ಚೀನಾದ ವಿದೇಶಾಂಗ ಸಚಿವ ತಮ್ಮ ಮೂರು ದಿನಗಳ ಪಾಕಿಸ್ತಾನ ಭೇಟಿಯ ನಂತರ ಕಾಬೂಲ್ನಲ್ಲಿದ್ದರು. ಸದ್ಯಕ್ಕೆ ಭಾರತಕ್ಕೆ ಆಗಮಿಸಿದ್ದಾರೆ. ಗಾಲ್ವಾನ್ ಘರ್ಷಣೆಯ ನಂತರ ಚೀನಾದ ಹಿರಿಯ ನಾಯಕರೊಬ್ಬರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.