Breaking News

ಕೆಮ್ಮುತ್ತಿದ್ದ ಹುಡುಗಿಯನ್ನು ನೋಡಿ ಕೊರೊನಾ, ಕೊರೊನಾ ಎಂದೆ… ಆದರೆ!

Spread the love

ಮೈಸೂರು: ನಾನು ಕೋವಿಡ್-19 ಪೀಡಿತನಾಗಿದ್ದು ನನ್ನ ತಪ್ಪಿನಿಂದಲೇ. ನಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳು ಕೆಮ್ಮುತ್ತಿದ್ದಳು. ಮೊಬೈಲ್‌ನಲ್ಲಿ ಮಾತನಾಡುತ್ತಲೇ ಆಕೆಯನ್ನು ರೇಗಿಸಿದೆ. ಕೊರೊನಾ… ಕೊರೊನಾ… ಎಂದೆ.

ಇದರಿಂದ ಸಿಟ್ಟಾದ ಆಕೆ ನೇರವಾಗಿ ನನ್ನ ಬಳಿ ಬಂದು ಕೆಮ್ಮಿದಳು. ನನಗೆ ಬಂದಿದ್ದರೆ, ನಿಮಗೂ ಬರಲಿ ಅಂದಳು. ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಕಾರಣ ನಾನು ಮಾಸ್ಕ್‌ಅನ್ನು ಕುತ್ತಿಗೆಗೆ ಇಳಿಸಿಕೊಂಡಿದ್ದೆ. ಅದೇ ಪರಿಸರದಲ್ಲಿ ಉಸಿರಾಡಿದ್ದೆ.

ಎರಡ್ಮೂರು ದಿನ ಕಳೆಯೋದರೊಳಗೆ ಕೊರೊನಾ ವೈರಸ್ ಸೋಂಕಿನ ಲಕ್ಷಣ ಕಾಣಿಸಿಕೊಂಡವು. ನನಗೆಲ್ಲಿ ಕೋವಿಡ್ ಎಂದುಕೊಂಡು ನಿರ್ಲಕ್ಷ್ಯವಹಿಸಿದೆ. ಸ್ಥಳೀಯ ವೈದ್ಯರ ಬಳಿಗೆ ತೆರಳಿ ಔಷಧಿ ತೆಗೆದುಕೊಂಡೆ. ಜ್ವರ ಬಿಟ್ಟಿತು. ಮೈ-ಕೈ ನೋವಿತ್ತು.

ತಲೆನೋವು ಜೊತೆಯಾಗಿತ್ತು.

ಎರಡ್ಮೂರು ದಿನಗಳ ಬಳಿಕ ಮತ್ತೆ ಜ್ವರ ಬಂತು. ಅದೇ ವೈದ್ಯರಲ್ಲಿಗೆ ಹೋದೆ. ಡಾಕ್ಟರ್ ಔಷಧಿ ಬದಲಿಸಿದರು. ಕೆಮ್ಮು, ಮೈ-ಕೈ ನೋವು ಕಡಿಮೆಯಾಗಲಿಲ್ಲ. ವೈದ್ಯರನ್ನೇ ಬದಲಿಸಿದೆ. ಅವರು ಕೋವಿಡ್-19
ಪರೀಕ್ಷೆಗೆ ಶಿಫಾರಸು ಮಾಡಿದರು. ಗಂಟಲು ದ್ರವವನ್ನು ಪರೀಕ್ಷೆಗೆ ಕೊಟ್ಟೆ.

ಸೋಂಕಿನ ಲಕ್ಷಣ ಇದ್ದರೂ ನಾನು ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಎಂದಿನಂತೆ ಗೆಳೆಯರು ಸೇರಿದ್ದ ಜಾಗಕ್ಕೆ ಹೋದೆ. ಮಾತುಕತೆಯ ನಡುವೆ ಕೆಲವರು ಧೂಮಪಾನ ಮಾಡಿದರು. ನನಗೆ ಸಿಗರೇಟ್ ಹೊಗೆ ಆಗದಿದ್ದರಿಂದ ಸಹಜವಾಗಿಯೇ ಕೆಮ್ಮಿದೆ. ನಾನು ಸೇರಿದಂತೆ ಅಲ್ಲಿದ್ದ ಏಳು ಮಂದಿಯಲ್ಲಿ ಐವರು ಮಾಸ್ಕ್ ಹಾಕಿರಲಿಲ್ಲ. ಇಬ್ಬರಷ್ಟೇ ಮಾಸ್ಕ್ ಧರಿಸಿದ್ದರು.

ಈ ಘಟನೆ ನಡೆದ ಒಂದೆರಡು ದಿನದೊಳಗಾಗಿ ನನ್ನ ಪರೀಕ್ಷಾ ವರದಿ ಪಾಸಿಟಿವ್ ಆಗಿತ್ತು. ನಿರೀಕ್ಷೆಯಂತೆ ಮಾಸ್ಕ್ ಧರಿಸದಿದ್ದ ನಾಲ್ವರು ಗೆಳೆಯರ ಕುಟುಂಬಗಳು ಸಹ ಕೋವಿಡ್ ಪೀಡಿತವಾದವು. ಮಾಸ್ಕ್ ಧರಿಸಿದ್ದ ಇಬ್ಬರ ಕುಟುಂಬಕ್ಕೆ ಯಾವೊಂದು ತೊಂದರೆಯಾಗಲಿಲ್ಲ. ನನ್ನಿಂದ ನೇರವಾಗಿ ನಾಲ್ವರಿಗೆ ಕೊರೊನಾ ವೈರಸ್ ಅಂಟಿತು. ಅವರಿಂದ ಅವರ ಕುಟುಂಬಗಳು ಬಾಧಿತವಾದವು.

ನನ್ನದೇ ತಪ್ಪಿನಿಂದ ಕೋವಿಡ್ ಬಾಧಿತನಾಗುವ ಜೊತೆ, ಸ್ನೇಹಿತರ ಕುಟುಂಬಕ್ಕೆ ಕಂಟಕವಾದೆ. ಮಾಸ್ಕ್ ಇರುವುದು ಕುತ್ತಿಗೆಗೆ ಹಾಕಿಕೊಳ್ಳಲಲ್ಲ. ಸರಿಯಾಗಿ ಮೂಗು, ಬಾಯಿ ಮುಚ್ಚುವಂತೆ ಹಾಕಿಕೊಳ್ಳಬೇಕು.

ಕೋವಿಡ್ ವಿರುದ್ಧ ಹೋರಾಡಿ ಗೆಲ್ಲುವುದು ನಂತರದ ಮಾತು. ಕೊರೊನಾ ವೈರಸ್ ಸೋಂಕು ತಗುಲದಂತೆ ಎಚ್ಚರಿಕೆಯಿಂದ ಇರುವುದು ಮೊದಲ ಆದ್ಯತೆಯಾಗಬೇಕು.

ಒಬ್ಬರೇ ಇದ್ದಾಗ ಮಾಸ್ಕ್ ಧರಿಸುವುದು ಅಗತ್ಯವಿರಲ್ಲ. ಆದರೆ ಮತ್ತೊಬ್ಬರು ಇದ್ದಾಗ ಮಾಸ್ಕ್ ಧರಿಸಲೇಬೇಕು. ಪರಸ್ಪರ ಮಾತನಾಡುವಾಗ ಮಾಸ್ಕ್ ಕುತ್ತಿಗೆಯಲ್ಲಿರಬಾರದು, ಮೂಗು-ಬಾಯಿ ಮುಚ್ಚುವಂತೆ ಧರಿಸಬೇಕು. ಹೊರಗೆ ಹೋಗಿ ಬಂದ ಬಳಿಕ ಸ್ನಾನ ಮಾಡುವ ಮೂಲಕ ಕೊರೊನಾ ವೈರಸ್ ಸೋಂಕು ಹರಡುವಿಕೆಯ ಸರಪಳಿಯನ್ನೇ ತುಂಡರಿಸಬಹುದು.

 


Spread the love

About Laxminews 24x7

Check Also

ವೀರಭದ್ರ ನಗರದ ದಶಕಗಳ ಸಮಸ್ಯೆಗೆ ಮುಕ್ತಿ: ಹೊಸ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಆಸೀಫ್ ಸೇಠ್ ಚಾಲನೆ!

Spread the loveಬೆಳಗಾವಿಯ ವೀರಭದ್ರ ನಗರದ 0 ಕ್ರಾಸ್ ನಿವಾಸಿಗಳ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ಸಿಕ್ಕಿದೆ. ಮಳೆಗಾಲದಲ್ಲಿ ರಸ್ತೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ