ಮಂಗಳೂರು : ಪಣಜಿ- ಕೊಚ್ಚಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ಮಂಗಳೂರು ಹೊರವಲಯದ ಕೆ.ಸಿ.ರೋಡ್ ಎಂಬಲ್ಲಿರುವ ಸೇತುವೆಯೊಂದು ಅಪಾಯಕ್ಕೆ ಮುನ್ಸೂಚನೆ ನೀಡುತ್ತಿದೆ. ಇತ್ತೀಚೆಗೆ ಈ ಸೇತುವೆಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸೇತುವೆಯ ತಡೆಗೋಡೆಯು ಸಂಪೂರ್ಣ ಹಾನಿಗೊಳಗಾಗಿದೆ. ಇದರಿಂದಾಗಿ ತಡೆಗೋಡೆ ಇಲ್ಲದ ಪರಿಣಾಮ ಹಾಗೂ ಅತ್ಯಂತ ಇಕ್ಕಟ್ಟಾಗಿರುವ ಸೇತುವೆಯಿಂದಾಗಿ ಇದರ ಮೇಲೆ ಸಂಚರಿಸುವ ವಾಹನಗಳಿಗೆ ಅಪಾಯ ಎದುರಾಗಿದೆ.
ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಈ ಸೇತುವೆಯ ಮೂಲಕವೇ ಹಾದು ಹೋಗುತ್ತಿದ್ದು, ಸೇತುವೆಯನ್ನು ಕೂಡಲೇ ದುರಸ್ತಿ ಮಾಡದೇ ಹೋದಲ್ಲಿ ಭಾರೀ ಅನಾಹುತಕ್ಕೆ ಕಾರಣವಾಗುಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯ ಜನರೂ ಈ ತಮ್ಮ ದಿನನಿತ್ಯದ ಉಪಯೋಗಕ್ಕಾಗಿ ಈ ಸೇತುವೆಯನ್ನೇ ಬಳಸುತ್ತಿದ್ದು, ತಡೆಗೋಡೆ ಮುರಿದ ಸೇತುವೆಯ ಮೇಲೆ ಪ್ರಾಣಭಯದಿಂದ ಸಾಗಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ಸೇತುವೆಯ ದುಸ್ಥಿತಿಯ ಕಾರಣದಿಂದಾಗಿ ಇದೀಗ ಸೇತುವೆಯ ಮೇಲೆ ಅಡ್ಡಲಾಗಿ ಬ್ಯಾರಿಕೇಡ್ ಅನ್ನೂ ಅಳವಡಿಸಲಾಗಿದೆ. ಆದರೆ ಈ ಬ್ಯಾರಿಕೇಡ್ ಗಳು ರಾತ್ರಿ ಸಂದರ್ಭದಲ್ಲಿ ವಾಹನ ಚಾಲಕರ ಗಮನಕ್ಕೆ ಬರದೇ ಇರುವುದರಿಂದ ಈ ಬ್ಯಾರಿಕೇಡ್ ಗಳೂ ಅಪಾಯಕ್ಕೆ ಎಡೆ ಮಾಡಿಕೊಡುತ್ತಿದೆ. ಅಲ್ಲದೆ ಈ ಸೇತುವೆಯಲ್ಲಿ ಏಕಮುಖ ಚಾಲನೆಗೆ ಅವಕಾಶವಿದ್ದರೂ, ಕೆಲವು ವಾಹನಗಳು ಈ ಸೇತುವೆಯ ಮೂಲಕ ವಿರುದ್ಧ ದಿಕ್ಕಿನಲ್ಲೂ ಬರುತ್ತಿರುವುದು ಅವಘಡಕ್ಕೆ ಕಾರಣವಾಗುತ್ತಿದೆ.
: ಜಿಡಿಪಿ ಮಹಾ ಕುಸಿತಕ್ಕೆ ಅಡ್ಡಕಸುಬಿ ಆರ್ಥಿಕ ನಿರ್ವಹಣೆಯೇ ಕಾರಣ ; ಸಿದ್ದರಾಮಯ್ಯ
ಸೇತುವೆಯ ದುಸ್ತಿತಿಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಕೂಡಲೇ ದುರಸ್ತಿ ಮಾಡುವಂತೆ ಸಾರ್ವಜನಿಕರು ಮನವಿಯನ್ನೂ ಮಾಡಿದ್ದಾರೆ. ದುರಸ್ತಿ ಕಾಮಗಾರಿಯು ವಿಳಂಬವಾದಷ್ಟು ಈ ಸೇತುವೆಯೂ ಹೆಚ್ಚು ಅಪಾಯಕಾರಿಯಾಗಲಿದೆ ಎನ್ನುವ ಎಚ್ಚರಿಕೆಯನ್ನೂ ಸ್ಥಳೀಯ ಗ್ರಾಮಸ್ಥರು ನೀಡಿದ್ದಾರೆ.
ರಾಜ್ಯದ ಅತ್ಯಂತ ಬ್ಯುಸಿ ಹೆದ್ದಾರಿಗಳಲ್ಲಿ ಒಂದಾಗಿರುವ ಈ ಹೆದ್ದಾರಿಯ ಚುತುಷ್ಪಥ ಕಾಮಗಾರಿಯು ಈ ಭಾಗದಲ್ಲಿ ಇತ್ತೀಚೆಗಷ್ಟೇ ಮುಗಿದಿದ್ದು, ಸರ್ವೀಸ್ ರಸ್ತೆಯ ನಿರ್ಮಾಣವೂ ಆಗಬೇಕಿದೆ. ಅಲ್ಲದೆ ಇದೀಗ ಅಪಾಯದ ಅಂಚಿನಲ್ಲಿರುವ ಸೇತುವೆಯು ಹಳೆಯ ಸೇತುವೆಯಾಗಿದ್ದು, ಮಂಗಳೂರಿನಿಂದ ಕೇರಳಕ್ಕೆ ಸಂಪರ್ಕಿಸುವ ರಸ್ತೆಯಲ್ಲಿದೆ. ಅದೇ ಪ್ರಕಾರ ಇದೇ ಸ್ಥಳದಲ್ಲಿ ಹೊಸ ಸೇತುವೆಯ ನಿರ್ಮಾಣವೂ ಆಗಿದ್ದು ಆ ಸೇತುವೆಯನ್ನು ಮೂಲಕ ಕೇರಳದಿಂದ ಮಂಗಳೂರು ಸಂಪರ್ಕ ರಸ್ತೆಗೆ ಜೋಡಿಸಲಾಗಿದೆ.