ಮಂಗಳೂರು: ರೈತರಿಗೆ ಮೋಸ ಮಾಡುತ್ತಿದ್ದ ಮಧ್ಯವರ್ತಿಗಳು, ಖರೀದಿದಾರರ ಪರವಾಗಿರುವ ಪ್ರತಿಪಕ್ಷಗಳು ಈ ರೈತಪರ ಕಾಯ್ದೆಯನ್ನು ವಿರೋಧಿಸುತ್ತವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಸ್ವತಂತ್ರ ಭಾರತದಲ್ಲಿ ಮೊದಲಬಾರಿಗೆ ರೈತರು ತಮ್ಮ ಉತ್ಪನ್ನಗಳನ್ನು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ದೇಶದ ಯಾವುದೇ ಭಾಗದಲ್ಲಿ ಉತ್ತಮ ಬೆಲೆಗೆ ಮಾರಬಹುದಾಗಿದೆ. ಕನಿಷ್ಠ ಬೆಂಬಲ ಬೆಲೆ ಮುಂದುವರಿಯಲಿದ್ದು ರೈತರು ಆಹಾರ ತಯಾರಿಕಾ ಕೈಗಾರಿಕೆಗಳೊಂದಿಗೆ ನೇರ ಒಪ್ಪಂದ ಮಾಡಿ ತಮ್ಮ ಇಚ್ಛಿತ ಬೆಲೆಯನ್ನು ಪಡೆಯಬಹುದಾಗಿದೆ’ ಎಂದು ಹೇಳಿದ್ದಾರೆ.
‘ಬೆಳೆ ಖರೀದಿಸುವ ಬಂಡವಾಳಶಾಹಿಗಳು ಅಗತ್ಯವಿರುವ ಯಂತ್ರೋಪಕರಣಗಳನ್ನು ರೈತರಿಗೆ ಒದಗಿಸಬೇಕು.
ರೈತರಿಗೆ ಸೂಕ್ತ ತಾಂತ್ರಿಕ ಸಲಹೆ, ಬೆಳೆನಾಶವಾದಲ್ಲಿ ಪೂರ್ಣ, ಭಾಗಶಃ ನಷ್ಟ ಭರಿಸುವ ಜವಾಬ್ದಾರಿಯೂ ಬಂಡವಾಳಶಾಹಿಗಳ ಮೇಲೆ ಇರುತ್ತದೆ’ ಎಂದಿದ್ದಾರೆ.
‘ಎಪಿಎಂಸಿಯಲ್ಲದೇ ಬೇರೆ ಕಡೆ ರೈತರ ವ್ಯಾಪಾರಕ್ಕೂ ಈ ಕಾಯ್ದೆಯಿಂದ ರಕ್ಷಣೆ ಸಿಗುವುದಲ್ಲದೇ ರೈತರ ಉತ್ಪನ್ನಗಳಿಗೆ ನಿಶ್ಚಿತ ಲಾಭ ದೊರಕಿಸಲು ಕೇಂದ್ರ ಸರ್ಕಾರ ಈ ರೈತಪರ ಕಾಯ್ದೆ ಜಾರಿಗೆ ತಂದಿದೆ’ ಎಂದು ತಿಳಿಸಿದ್ದಾರೆ.
‘ರೈತರಿಗೆ ಮೋಸ ಎಸಗುತ್ತಿದ್ದ ಮಧ್ಯವರ್ತಿಗಳು, ಖರೀದಿದಾರರ ಪರವಾಗಿರುವ ಪ್ರತಿಪಕ್ಷಗಳು ಈ ರೈತಪರ ಕಾಯ್ದೆಯನ್ನು ವಿರೋಧಿಸುತ್ತವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.