ಮುಂಬೈ ಮಹಾರಾಷ್ಟ್ರ-ಕರ್ನಾಟಕ ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ‘ನಿರ್ಧಿಷ್ಟ ಚೌಕಟ್ಟಿನ’ ಅಡಿಯಲ್ಲಿ ಕೆಲಸ ಮಾಡಬೇಕೆಂದು ಕರೆ ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡುವವರೆಗೂ ಗಡಿಯಲ್ಲಿ ಮರಾಠಿ ಮಾತನಾಡುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸುವಂತೆ ಪುನರುಚ್ಚರಿಸಿದ್ದಾರೆ.
‘ಈವರೆಗೆ ಏನಾಗಿದೆಯೋ ಅದೆಲ್ಲ ಆಗಿಹೋಯಿತು. ಈಗ ನಾವು ಗೆಲ್ಲಲು ಹೋರಾಡಬೇಕಿದೆ. ದೀರ್ಘ ಕಾಲದಿಂದಲೂ ಉಳಿದಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿರ್ಧಿಷ್ಟ ಸಮಯದಲ್ಲಿ ಪರಿಹರಿಸಿಕೊಳ್ಳುವತ್ತ ನಾವು ಕೆಲಸ ಮಾಡಬೇಕಾಗಿದೆ’ ಎಂದು ಎನ್ಸಿಪಿ ನಾಯಕ ಶರದ್ ಪವಾರ್ ಒಳಗೊಂಡಂತೆ ಮಹಾರಾಷ್ಟ್ರ ಉನ್ನತ ನಾಯಕರ ಸಮ್ಮುಖದಲ್ಲಿ ಶಿವಸೇನೆ ಅಧ್ಯಕ್ಷ ಠಾಕ್ರೆ ತಿಳಿಸಿದರು.
ಡಾ.ದೀಪಕ್ ಪವಾರ್ ಬರೆದ ಮರಾಠಿಯಲ್ಲಿ ಇರುವ ‘ಮಹಾರಾಷ್ಟ್ರ ಕರ್ನಾಟಕ ಸೀಮಾವಾದ್: ಸಂಘರ್ಷ್ ಅನಿ ಸಂಕಲ್ಪ್’ (ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಹೋರಾಟ ಮತ್ತು ಪ್ರತಿಜ್ಞೆ) ಹೆಸರಿನ 530 ಪುಟಗಳ ಈ ಕೃತಿಯನ್ನು ಬಿಡುಗಡೆ ಮಾಡಿದ ಬಳಿಕ ಠಾಕ್ರೆ ಮಾತನಾಡಿದರು. ಇಲ್ಲಿನ ಮಲಬಾರ್ ಬೆಟ್ಟದ ಸಹ್ಯಾದ್ರಿ ಅತಿಥಿಗೃಹದಲ್ಲಿ ನಡೆದ ಸಮಾರಂಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರು ಮತ್ತು ಗಡಿ ಪ್ರದೇಶಗಳ ಸ್ಥಳೀಯರು ಉಪಸ್ಥಿತರಿದ್ದರು.
‘ಸುಪ್ರೀಂ ಕೋರ್ಟ್ನಲ್ಲಿ ಈ ವಿಚಾರ ಬಾಕಿ ಇಧೆ. ಆದರೆ ಕರ್ನಾಟಕ (ಸರ್ಕಾರ) ವರ್ತಿಸುವ ರೀತಿಯು ನ್ಯಾಯಾಂಗ ನಿಂದನೆಗೆ ಸಮನಾಗಿರುತ್ತದೆ. ಅವರು ಬೆಳಗಾಂ ಹೆಸರನ್ನು (ಬೆಳಗಾವಿ ಎಂದು) ಬದಲಾಯಿಸಿದ್ದಾರೆ. ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡಿದ್ದಾರೆ, ಅಲ್ಲೊಂದು ವಿಧಾನ ಸೌಧವನ್ನು ನಿರ್ಮಿಸಿ ಅಧಿವೇಶನವನ್ನು ನಡೆಸಿದರು’ ಎಂದು ಠಾಕ್ರೆ ಹೇಳಿದರು.
ಈ ವಿಚಾರವು ಸುಪ್ರೀಂ ಕೋರ್ಟಿನಲ್ಲಿ ಬಾಕಿ ಉಳಿದಿದೆ. ಸುಪ್ರೀಂ ಕೋರ್ಟ್ ಸಮಸ್ಯೆಯನ್ನು ಪರಿಹರಿಸುವ ಕೊನೆಯ ದಾರಿಯಾಗಿದೆ. ನಾವು ನಮ್ಮ ವಿಚಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅದರ ಮುಂದಿಡಬೇಕು. ಮುಖ್ಯಮಂತ್ರಿ (ಠಾಕ್ರೆ) ಅವರು ವೈಯಕ್ತಿಕವಾಗಿ ಈ ಕುರಿತು ಕೆಲಸ ಮಾಡುತ್ತಿದ್ದಾರೆ’ ಎಂದು ಶರದ್ ಪವಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಪ್ರವೀಣ್ ದಾರೇಕರ್, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮತ್ತು ಕಂದಾಯ ಸಚಿವ ಬಾಲಾಸಾಹೇಬ್ ಥೋರಟ್, ಮರಾಠಿ ಭಾಷಾ ಇಲಾಖೆ ಸಚಿವ ಸುಭಾಷ್ ದೇಸಾಯಿ, ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಚಾಗನ್ ಭುಜ್ಬಾಲ್, ರಾಜ್ಯ ಸಾಮಾನ್ಯ ಆಡಳಿತ ವಿಭಾಗದ ದತ್ತಾತ್ರೇಯ ಭರಣೆ, ಮುಂಬೈ ದಕ್ಷಿಣ ಸಂಸದ ಅರವಿಂದ ಸಾವಂತ್ ಇದ್ದರು.