ನವದೆಹಲಿ: ದೇಶಾದ್ಯಂತ ಹೆಮ್ಮಾರಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಹೀಗಾಗಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ಡೌನ್ ಅನ್ನು ವಿಸ್ತರಿಸುವಂತೆ ಅನೇಕ ರಾಜ್ಯ ಸರ್ಕಾರಗಳು ಮತ್ತು ತಜ್ಞರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಇತ್ತ ಕೇಂದ್ರ ಸರ್ಕಾರವೂ ಲಾಕ್ಡೌನ್ ವಿಸ್ತರಿಸುವ ನಿಟ್ಟಿನಲ್ಲಿ ಯೋಚನೆ ನಡೆಸಿದೆ. ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 24ರಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ದೇಶಾದ್ಯಂತ 21 ದಿನಗಳ ಲಾಕ್ಡೌನ್ ವಿಧಿಸುವ ಕ್ರಮವನ್ನು ಘೋಷಿಸಿದ್ದರು. ಅಂದು ಮಧ್ಯರಾತ್ರಿಯಿಂದ ಲಾಕ್ಡೌನ್ ಜಾರಿಗೆ ಬಂದಿತ್ತು. ಒಂದು ವೇಳೆ 21 ದಿನಗಳ ಲಾಕ್ಡೌನ್ ವಿಸ್ತರಿಸದೆ ಹೋದಲ್ಲಿ ಏಪ್ರಿಲ್ 14 ರಂದು ಕೊನೆಗೊಳ್ಳುತ್ತದೆ. ಆದರೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಇದೇ ವಿಚಾರವಾಗಿ ಮಾತನಾಡಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು, ಲಾಕ್ಡೌನ್ ಅನ್ನು ಮೇ ಕೊನೆಯ ವಾರದವರೆಗೂ ವಿಸ್ತರಿಸವ ಅಗತ್ಯವಿದೆ. ದೇಶದಲ್ಲಿ ಕೊರೊನಾವೈರಸ್ ಹರಡುತ್ತಿರುವ ಮಾಹಿತಿ ಮೇಲೆ ಕೇಂದ್ರ ಸರ್ಕಾರ ಲಾಕ್ಡೌನ್ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಅಂತಿಮವಾಗಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧರಾಗಿರುವಂತೆ ವೆಂಕಯ್ಯ ನಾಯ್ಡು ದೇಶದ ಜನರಿಗೆ ಕೇಳಿಕೊಂಡಿದ್ದಾರೆ. ಮಾರ್ಚ್ 25ರಿಂದ ಜಾರಿಗೆ ಬಂದ ಲಾಕ್ಡೌನ್ ಎರಡು ವಾರ ಪೂರ್ಣಗೊಂಡಿದೆ. ಇದರಿಂದಾಗಿ ಅನೇಕ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿವೆ. ದೇಶದ ಜನರ ಕಾಯುತ್ತಿರುವ ನಾಯಕತ್ವವನ್ನು ಬೆಂಬಲಿಸುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಭಾರತದಲ್ಲಿ ಮಂಗಳವಾರದ ಮಧ್ಯಾಹ್ನದ ವೇಳೆಗೆ ಒಟ್ಟು 4,421 ಜನರಿಗೆ ಕೊರೊನಾ ಸೋಂಕು ತಗುಲಿದೆ. ಮೃತರ ಸಂಖ್ಯೆ ಈಗ 114 ಕ್ಕೆ ಏರಿದೆ.