ಮುಂಬೈ: ಸೊಸೆ ಐಶ್ವರ್ಯಾ ರೈ ಮತ್ತು ಮೊಮ್ಮಗಳು ಆರಾಧ್ಯ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸಂತಸದ ವಿಷಯ ಕೇಳಿ ಬಿಗ್ ಬಿ ಅಮಿತಾಬ್ ಬಚ್ಚನ್ ಕಣ್ಣೀರಿಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಮಿತಾಬ್ ಬಚ್ಚನ್, ಮೊಮ್ಮಗಳು ಮತ್ತು ಸೊಸೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸುದ್ದಿ ಕೇಳಿದ ಕೂಡಲೇ ಕಣ್ಣಂಚಲಿ ನೀರು ಬಂತು. ಓ ದೇವರೆ ನಿನ್ನ ಕೃಪೆ ಹೀಗೆ ಇರಲಿ ಎಂದು ಭಾವನಾತ್ಮಕವಾಗಿ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ.ಸೋಮವಾರ ಸಂಜೆ ಪುತ್ರಿ ಮತ್ತು ಪತ್ನಿ ಮುಂಬೈನ ನಾನಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವ ವಿಷಯವನ್ನು ಅಭಿಷೇಕ್ ಬಚ್ಚನ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. “ನಿಮ್ಮ ನಿರಂತರ ಪ್ರಾರ್ಥನೆ ಮತ್ತು ಶುಭಾಶಯಗಳಿಗೆ ಧನ್ಯವಾದಗಳು. ಐಶ್ವರ್ಯ ಮತ್ತು ಆರಾಧ್ಯ ಇಬ್ಬರಿಗೂ ಕೋವಿಡ್ ನೆಗೆಟಿವ್ ಬಂದಿದೆ. ಅವರು ಆಸ್ಪತ್ರೆಯಿಂದ ಡಿಸ್ಚಾಜ್ ಆಗಿದ್ದು, ಈಗ ಮನೆಯಲ್ಲಿದ್ದಾರೆ. ನಾನು ಮತ್ತು ನನ್ನ ತಂದೆ ವೈದ್ಯಕೀಯ ಸಿಬ್ಬಂದಿಯ ಆರೈಕೆಯಲ್ಲಿ ಆಸ್ಪತ್ರೆಯಲ್ಲಿದ್ದೇನೆ” ಎಂದು ಟ್ವೀಟ್ ಮಾಡುವ ಮೂಲಕ ಅಭಿಷೇಕ್ ಬಚ್ಚನ್ ತಿಳಿಸಿದ್ರು.
ಜುಲೈ 11ರಂದು ಅಭಿಷೇಕ್ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್ ಇಬ್ಬರಿಗೂ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ಮರುದಿನ ಅಂದ್ರೆ ಐಶ್ವರ್ಯಾ ಮತ್ತು ಆರಾಧ್ಯಗೂ ಸೋಂಕು ಖಚಿತವಾಗಿತ್ತು. ಹಾಗಾಗಿ ಎಲ್ಲರೂ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು.