ಬೆಂಗಳೂರು: ಕೊರೊನಾದಿಂದ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯ ಆರೋಗ್ಯದಲ್ಲಿ ಗಂಭೀರವಾದ ಹಿನ್ನೆಲೆಯಲ್ಲಿ ಎಸ್ಪಿಬಿ ಶೀಘ್ರಗುಣಮುಖರಾಗಲಿ ಅಂತ ದೇವರಲ್ಲಿ ಪ್ರಾರ್ಥಿಸೋಣ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.ಸೋಶಿಯಲ್ ಮೀಡಿಯಾದ ಮೂಲಕ ಭಾರತಿ ವಿಷ್ಣುವರ್ಧನ್ ಅವರು ಬಾಲಸುಬ್ರಹ್ಮಣ್ಯ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋವನ್ನು ನಟ ಅನಿರುದ್ಧ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ನಮ್ಮ ಬಾಲಸುಬ್ರಹ್ಮಣ್ಯ ಅವರು ಕೊರೊನಾದಿಂದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದು, ಅದರಿಂದ ನರಳುತ್ತಿದ್ದಾರೆ. ಈ ಸುದ್ದಿ ಕೇಳಿ ನನಗೆ ಬಹಳ ಬೇಸರವಾಗಿದೆ. ಅಂತಹ ಮಹಾನ್ ಗಾಯಕರು, ಮಹಾನ್ ವ್ಯಕ್ತಿ ಎಲ್ಲರಿಗೂ ಆತ್ಮೀಯವಾಗಿ ಇರುವವರು. ಆದಷ್ಟು ಬೇಗ ಅವರು ನಮ್ಮ ಮನೆಗಳಿಗೆ ಬರಲಿ. ಅವರನ್ನು ನಾವು ಮಿಸ್ ಮಾಡೋಕೆ ಆಗಲ್ಲ” ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.
ಅಲ್ಲದೇ “ಅವರನ್ನು ನೋಡಿದಾಗಲೆಲ್ಲ ನಮ್ಮ ಯಜಮಾನ್ರು ನೆನಪಾಗುತ್ತಾರೆ. ಯಾಕೆಂದರೆ ಅವರಿಬ್ಬರದ್ದು ಎರಡು ಶರೀರ ಆದ್ರೂ ಒಂದೇ ಶಾರೀರ. ಅವರನ್ನು ಎಲ್ಲರೂ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ” ಎಂದರು. ಬಾಲು ಅವರೇ ಧೈರ್ಯವಾಗಿರಿ, ನಿಮಗೆ ಏನು ಹಾಗಲ್ಲ. ನೀವು ಖಂಡಿತ ಆರೋಗ್ಯವಾಗಿ ವಾಪಸ್ ಬರುತ್ತೀರಿ ಎಂದು ನಟಿ ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.