ಬಳ್ಳಾರಿ: ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೇ ಬಸವರಾಜ್ ಬೊಮ್ಮಾಯಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಸದ್ಯದಲ್ಲೇ ಬಸವರಾಜ್ ಬೊಮ್ಮಾಯಿ ಹೈಕಮಾಂಡ್ ಆದೇಶದ ಮೇರೆಗೆ ಹೊಸ ಸಚಿವ ಸಂಪುಟ ರಚನೆ ಮಾಡಲಿದ್ದಾರೆ. ಹೀಗಾಗಿ ಹಲವರು ಸಚಿವ ಸ್ಥಾನಕ್ಕೆ ಭಾರೀ ಲಾಬಿ ನಡೆಸುತ್ತಿದ್ದಾರೆ. ಈ ಸಾಲಿಗೆ ಈಗ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಸೇರ್ಪಡೆಗೊಂಡಿದ್ದಾರೆ.
ಹೌದು, ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ತನಗೂ ಮಂತ್ರಿ ಸ್ಥಾನಕ್ಕೆ ನೀಡುವಂತೆ ಹೈಕಮಾಂಡ್ ಬಳಿ ಭಾರೀ ಲಾಬಿಗೆ ಮುಂದಾಗಿದ್ದಾರೆ. ಇದಕ್ಕಾಗಿ ಗಣಿ ನಾಡು ಬಳ್ಳಾರಿಗೂ ಒಂದು ಮಂತ್ರಿ ಸ್ಥಾನ ಕೊಡಿ ಎಂದು ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.
ಒಂದು ಕಾಲದಲ್ಲಿ ಬಳ್ಳಾರಿಯಿಂದ ಮೂವರು ಸಚಿವರಾಗಿದ್ದರು. ಈಗ ಕನಿಷ್ಠ ಒಬ್ಬರು ಇಲ್ಲ. ಬಳ್ಳಾರಿಗೆ ಸರ್ಕಾರದ ಪ್ರಾತಿನಿಧ್ಯ ಸಿಗದ ಕಾರಣ ಗಣಿ ನಾಡಿನಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗುತ್ತಿದೆ. ಹೀಗಾಗಿ ಪಾಲಿಕೆ ಚುನಾವಣೆಯಲ್ಲಿ ಸೋತಿದ್ದೇವೆ. ಬಳ್ಳಾರಿ ಇಬ್ಭಾಗ ಮಾಡಿದ ಸಿಟ್ಟು ಜನರಲ್ಲಿದೆ ಎಂದು ರಾಜ್ಯಕ್ಕೆ ವೀಕ್ಷಕರಾಗಿ ಆಗಮಿಸಿದ್ದ ಧರ್ಮೇಂದ್ರ ಪ್ರಧಾನ್ ಹಾಗೂ ಕಿಶನ್ ರೆಡ್ಡಿಗೆ ಮನವಿ ಮಾಡಿದ್ದಾರೆ.
ಶ್ರೀರಾಮುಲು ಡಿಸಿಎಂ ಪೋಸ್ಟ್ ಬಳ್ಳಾರಿ ಕೋಟ ಅಲ್ಲ
ಇನ್ನು, ಸಚಿವ ಬಿ. ಶ್ರೀರಾಮುಲುಗೆ ಡಿಸಿಎಂ ಪೋಸ್ಟ್ ನೀಡಿದರೂ ಅದು ಬಳ್ಳಾರಿ ಕೋಟಾದಡಿಗೆ ಬರಲ್ಲ. ನನಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಕೊಡುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿಗೆ ಮನ್ನಣೆ ಸಿಗುವಂತೆ ಮಾಡಿ ಎಂದು ದೆಹಲಿ ನಾಯಕರ ಬಳಿ ಕೇಳಿಕೊಂಡಿದ್ದಾರೆ.