ಯಾದಗಿರಿ: ಲಕ್ಕಿ ಸ್ಕೀಮ್ ಹೆಸರಿನಲ್ಲಿ ಹಳ್ಳಿ ಜನರಿಗೆ ಪಂಗನಾಮ ಹಾಕಿ ಆರೋಪಿಗಳು ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಯಾದಗಿರಿಯ ಕೆಎಎಸ್ಎಸ್ ಎಂಟರ್ಪ್ರೈಸಸ್ ಹೆಸರಿನ ಗುಂಪೊಂದು ನಿಮಗೆ ಕಾರು ,ಬೈಕ್ ಸಿಗುತ್ತದೆ ಎಂದು ಹೇಳಿ ಹಳ್ಳಿ ಜನರನ್ನು ನಂಬಿಸಿ ಲಕ್ಕಿ ಸ್ಕೀಮ್ ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಜನವರಿ ತಿಂಗಳಲ್ಲಿ ಯಾದಗಿರಿ ನಗರದಲ್ಲಿ ಕೆಎಸ್ಎಸ್ ಎಂಟರ್ಪ್ರೈಸಸ್ ಆರಂಭ ಮಾಡಿಲಾಗಿತ್ತು. 8 ಕಂತುಗಳಲ್ಲಿ ಪ್ರತಿ ಬಾರಿ ₹399 ಲಕ್ಕಿ ಸ್ಕೀಮ್ ಕಟ್ಟಬೇಕು ಎಂದು ಹಳ್ಳಿ ಜನರನ್ನು ನಂಬಿಸಿದ್ದರು. ಇದರಂತೆ ಸುಮಾರು 3,500 ಕ್ಕೂ ಅಧಿಕ ಮಂದಿ 6 ರಿಂದ 7 ಕಂತುಗಳ ಹಣ ಕಟ್ಟಿಸಿಕೊಂಡಿದ್ದಾರೆ. ಅಲ್ಲದೇ ಸ್ಕೀಮ್ ಸದಸ್ಯತ್ವಕ್ಕೆ ಪ್ರತಿಯೊಬ್ಬರಿಂದ ₹100 ಕಟ್ಟಿಸಿಕೊಂಡು ಕಂತು ಮುಗಿಯುವ ಹಂತದಲ್ಲಿ ಆಫೀಸ್ಗೆ ಬೀಗ ಹಾಕಿ ಆರೋಪಿಗಳು ಪರಾರಿಯಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಯರಗೋಳ, ಬಂದಳ್ಳಿ,ಹತ್ತಿಕುಣಿ ಸೇರಿ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಹಳ್ಳಿಜನರಿಗೆ ವಂಚನೆಯಾಗಿದೆ. ಕೆಎಸ್ಎಸ್ ಎಂಟರ್ಪ್ರೈಸಸ್ ಮ್ಯಾನೇಜರ್ ಮಲ್ಲಿಕಾರ್ಜುನ ಹಾಗೂ ಇತರ ಸಿಬ್ಬಂದಿ ವಿರುದ್ಧ ನೂರಕ್ಕೂ ಅಧಿಕ ಮಂದಿ ಜಿಲ್ಲಾ ಎಸ್.ಪಿ ಸಿ.ಬಿ.ವೇದಮೂರ್ತಿ ಅವರಿಗೆ ದೂರು ನೀಡಿದ್ದಾರೆ.