ಬೆಳಗಾವಿ: ಘಟ್ಟ ಪ್ರದೇಶ ಸೇರಿ ಜಿಲ್ಲೆಯ ಹಲವೆಡೆ ಕಳೆದ ಮೂರು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ನದಿ, ಹಳ್ಳ, ಕೆರೆಗಳು ಮೈದು0ಬಿವೆ. ಮೂರು ದಿನಗಳ ಮಳೆಗೆ ಗೋಕಾಕ್ ಜಲಪಾತಕ್ಕೆ ಸಹ ಜೀವ ಕಳೆ ಬಂದಿದ್ದು, ಧುಮ್ಮಿಕ್ಕಿ ಹರಿಯುತ್ತಿದೆ.
ಕರ್ನಾಟಕದ ನಯಾಗರ ಎಂದೇ ಕರೆಯಲಾಗುವ ಗೋಕಾಕ್ ಜಲಪಾತ ಈಗ ಧುಮ್ಮಿಕ್ಕುತ್ತಿದ್ದು, ಕಣ್ಮನ ಸೆಳೆಯುತಿದ್ದೆ. ಘಟಪ್ರಭಾ ನದಿಯ ಸೌಂದರ್ಯ ಗೋಕಾಕ್ ಜಲಪಾತದಲ್ಲಿ ಗರಿಬಿಚ್ಚಿದೆ. ಸುತ್ತಲೂ ಹಚ್ಚ ಹಸಿರು ನಡುವೆ ನೀರ ಧಾರೆಯ ಸೊಬಗು, ಸ್ವರ್ಗವೇ ಧರೆಗಿಳಿದಂತಿದೆ. ನಿಸರ್ಗ ಪ್ರಿಯರಿನ್ನು ಗೋಕಾಕ್ ಜಲಪಾತ ತನ್ನತ್ತ ಸೆಳೆಯುತ್ತಿದೆ. ಆದರೆ ಲಾಕ್ಡೌನ್ ಜಾರಿಯಲ್ಲಿರುವದರಿಂದ ಹೆಚ್ಚು ಜನ ತೆರಳುತ್ತಿಲ್ಲ.
ರಾಜ್ಯದ ಹಲವೆಡೆ ಮುಂಗಾರು ಅಬ್ಬರಿಸುತಿದ್ದು, ಬೆಳಗಾವಿ ಜಿಲ್ಲೆ ಹಾಗೂ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃಷ್ಣಾ ಹಾಗೂ ಉಪನದಿಗಳಾದ ದೂದಗಂಗಾ, ವೇದಗಂಗಾ ಸೇರಿ ಎಲ್ಲ ನದಿ, ಹಳ್ಳ ಕೊಳ್ಳಗಳು ಭೋರ್ಗರೆಯುತ್ತಿವೆ.