ಬೆಂಗಳೂರು : ಲಂಚದ ಪಡೆದ ಆರೋಪದಡಿ ಕೊಡಿಗೆಹಳ್ಳಿ ಪೊಲೀಸ್ ಠಾಣೆಯ ಎಎಸ್ಐ ದಯಾನಂದ ಸ್ವಾಮಿ ಅಮಾನತುಗೊಂಡ ಬೆನ್ನಲೇ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಯಲಹಂಕ ಉಪನಗರ ಠಾಣಾ ವ್ಯಾಪ್ತಿಯಲ್ಲಿರುವ ಮನೆ ಮೇಲೆ 15 ಮಂದಿ ಅಧಿಕಾರಿಗಳ ತಂಡವು ದಾಳಿ ನಡೆಸಿದೆ. ಮನೆಯಲ್ಲಿ ದೊರೆತ ದಾಖಲಾತಿ ಪತ್ರಗಳನ್ನು ಪರಿಶೀಲಿಸುತ್ತಿದೆ. ಚರಾಸ್ತಿ ಹಾಗೂ ಸಿರಾಸ್ತಿ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. ಸುಮಾರು 6 ಕೋಟಿ ರೂ. ಮೌಲ್ಯದ ಮನೆಯನ್ನು ಎಎಸ್ಐ ಕಟ್ಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಲಂಚ ಪಡೆದ ಆರೋಪದಡಿ ಉದ್ಯಮಿ ಭರತ್ ಶೆಟ್ಟಿ ಎಂಬುವರು ಇತ್ತೀಚೆಗೆ ನಗರದ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ಹಾಗೂ ಎಸಿಬಿಗೆ ದೂರು ನೀಡಿದ್ದರು. ಆಂತರಿಕ ತನಿಖೆ ನಡೆಸಿ ಪ್ರಾಥಮಿಕ ತನಿಖಾ ವರದಿಯನ್ನು ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ಅವರು, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಸಲ್ಲಿಸಿದ್ದರು. ಮೇಲ್ನೋಟಕ್ಕೆ ಎಎಸ್ಐ ತಪ್ಪಿತಸ್ಥ ಎಂದು ಕಂಡು ಬಂದಿದ್ದರಿಂದ ಸಸ್ಪೆಂಡ್ ಮಾಡಿ ಎಸಿಬಿ ತನಿಖೆಗೆ ಶಿಫಾರಸು ಮಾಡಲಾಗಿತ್ತು. ಭರತ್ ಶೆಟ್ಟಿ ಮೇಲೆ ವಂಚನೆ ಹಾಗೂ ಹಲ್ಲೆ ಕೇಸ್ ದಾಖಲಾಗಿತ್ತು. ಪ್ರಕರಣದಿಂದ ಮುಕ್ತಗೊಳಿಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲು ಎಎಸ್ಐ ದಯಾನಂದ ಸ್ವಾಮಿ 5 ಲಕ್ಷ ರೂ. ಲಂಚ ಪಡೆದಿದ್ದರು. ಅಲ್ಲದೆ, ತಮ್ಮ ಅಧಿಕಾರದ ಪ್ರಭಾವ ಬಳಸಿ ಉದ್ದೇಶಪೂರ್ವಕವಾಗಿವಾಗಿ ಪ್ರಕರಣ ದಾಖಲಿಸಿ ಹಣ ಸುಲಿಗೆ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಭರತ್, ಎಎಸ್ಐ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ಹಾಗೂ ಎಸಿಬಿ ದೂರು ನೀಡಿದ್ದರು.ಪ್ರಾಥಮಿಕ ತನಿಖೆಯಲ್ಲಿ ಎಸ್ಐಐ ಮೇಲೆ ಬಂದ ಆಪಾದನೆ ಮೇಲ್ನೊಟಕ್ಕೆ ಸಾಬೀತಾಗಿದ್ದು, ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು. ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಆಯುಕ್ತರು ಪತ್ರ ಬರೆದ ಬೆನ್ನಲೇ ಇಂದು ಎಸಿಬಿ ದಾಳಿ ನಡೆಸಿದೆ.