ಬೆಂಗಳೂರು: ಇನ್ನೂ ಮುಗಿದಿಲ್ಲ ಕರ್ನಾಟಕ ಬಿಜೆಪಿ ಗೊಂದಲ. ಮೂಮದೆರಡು ವರ್ಷ ಕಾಲ ರಾಜ್ಯದಲ್ಲಿ ಮುಖ್ಯಮಂತ್ರಿಯನ್ನು ಬದಲಾಯಸುವುದಿಲ್ಲ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೇ ಕಳೆದ ವಾರ ಸ್ಪಷ್ಟಪಡಿಸಿದ್ದರೂ ಇನ್ನೂ ಬಗೆಹರಿದಿಲ್ಲ ರಾಜ್ಯ ಬಿಜೆಪಿ ನಾಯಕತ್ವದ ಬಗೆಗಿನ ಅಸ್ಪಷ್ಟತೆ. ಈ ಮಧ್ಯೆ ರಾಜ್ಯದ ಮುಖ್ಯಮಂತ್ರಿ ಸ್ಥಾನದಿಂದ ಬಿ ಎಸ್ ಯಡಿಯೂರಪ್ಪ ಅವರನ್ನು ಕೆಳಗಿಳಿಸಬಾರದು ಎಂದು ವೀರಶೈವ ಲಿಂಗಾಯತ ಮಠಾಧೀಶರು ಬಿಜೆಪಿ ಹೈಕಮಾಂಡ್ಗೆ ಒಕ್ಕೊರಲಿನ ಒತ್ತಾಯದ ಸಂದೇಶ ರವಾನಿಸಿಯೂ ಆಗಿದೆ. ಆದರೂ ರಾಜ್ಯ ಬಿಜೆಪಿಯಲ್ಲಿ ಕೆಲ ಶಾಸಕರ ಅಸಮಾಧಾನ ಮುಂದುವರಿದಿದೆ.
ಈ ಬೆಳವಣಿಗೆಗಳಿಗೆ ಇಂಬು ಕೊಡುವಂತೆ ಸ್ವತಃ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರೇ ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಬರುತ್ತಿದ್ದಾರೆ. ಇದೇ ಅವಕಾಶವನ್ನು ಬಳಸಿಕೊಂಡು ರಾಜ್ಯದ ಅನೇಕ ಜಿಲ್ಲೆಗಳ ಬಿಜೆಪಿ ಶಾಸಕರು ಅರುಣ್ ಸಿಂಗ್ ಬಲೀ ಭೇಟಿಗೆ ಸಮಯಾವಕಾಶ ಕೋರಿದ್ದಾರೆ.
ಜೂನ್ 17ರಂದು ಬಿಜೆಪಿ ಶಾಸಕರ ನಿಯೋಗಗವೊಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ, ತಮ್ಮ
ಸೂಕ್ತ ಅಭಿಪ್ರಾಯ ಹೇಳಲು ಮುಂದಾಗಿದ್ದಾರೆ. ಸದರಿ ಶಾಸಕರ ತಂಡವು ಅರುಣ್ಸಿಂಗ್ ಭೇಟಿಯಾಗಿ ನಮ್ಮ ಅಹವಾಲು ಹೇಳುತ್ತೇವೆ. ಪಕ್ಷದ ಭವಿಷ್ಯದ ದೃಷ್ಟಿಯಿಂದ ಕೆಲ ಅಭಿಪ್ರಾಯ ತಿಳಿಸ್ತೇವೆ. ಸರ್ಕಾರಕ್ಕೆ ಒಳ್ಳೆಯದಾಗಬೇಕೆಂಬ ಕಾರಣಕ್ಕೆ ನಮ್ಮೀ ಅಭಿಪ್ರಾಯ ಸಲ್ಲಿಸುತ್ತೇವೆ ಅನ್ನುತ್ತಿದ್ದಾರೆ.
ಈ ಶಾಸಕರು ಪಕ್ಷದ ಚೌಕಟ್ಟಿನಲ್ಲೇ ಕೆಲ ಸಲಹೆಗಳನ್ನು ನೀಡಲು ಪ್ಲ್ಯಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅರುಣ್ಸಿಂಗ್ಗೆ ತಮ್ಮ ಭಾವನೆ ಹೇಳಲು ನಿರ್ಧರಿಸಿರುವ ಶಾಸಕರು ಉಸ್ತುವಾರಿಗೆ ಸಲಹೆ ಕೊಡ್ತೇವೆ, ಮುಂದಿನದ್ದು ಅವರಿಗೆ ಬಿಟ್ಟದ್ದು ಎಂಬ ನಿರ್ಧಾರ ತಳೆದಿದ್ದಾರೆ ಎಂದು ಅರುಣ್ ಸಿಂಗ್ ಭೇಟಿಗೆ ಉದ್ದೇಶಿಸಿರುವ ಶಾಸಕರಿಂದ ಮಾಹಿತಿ ಲಭ್ಯವಾಗಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಹುತೇಕ ಎಲ್ಲಾ ಶಾಸಕರು, ಕೊಡಗು ಜಿಲ್ಲೆಯ ಇಬ್ಬರು, ಮೈಸೂರು ಜಿಲ್ಲೆಯ ಶಾಸಕರಿಬ್ಬರು, ಬಾಗಲಕೋಟೆ ಜಿಲ್ಲೆಯ ಇಬ್ಬರು, ಚಿತ್ರದುರ್ಗ ಜಿಲ್ಲೆಯ ಒಬ್ಬರು, ಧಾರವಾಡ ಜಿಲ್ಲೆಯ ಓರ್ವ ಶಾಸಕರು ತಂಡವಾಗಿ ತೆರಳಿ ಅರುಣ್ ಸಿಂಗ್ರನ್ನು ಭೇಟಿಯಾಗಲು ನಿರ್ಧಾರ ಮಾಡಿದ್ದಾರೆ. ಜೂನ್ 17ರಂದು ಗುರುವಾರ ಬೆಳಗ್ಗೆ ಬಿಜೆಪಿ ಕಚೇರಿಯಲ್ಲಿ ಉಸ್ತುವಾರಿ ಅರುಣ್ ಸಿಂಗ್ರನ್ನು ಭೇಟಿಯಾಗುವ ಸಾಧ್ಯತೆಯಿದೆ.