ಬೆಂಗಳೂರು : ಬಿಜೆಪಿ ಸರ್ಕಾರ ನೀಡಬಹುದಾದ ಅತಿದೊಡ್ಡ ಪರಿಹಾರ ಪ್ಯಾಕೇಜ್ ಎಂದರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ತಗ್ಗಿಸುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ತೈಲ ಬೆಲೆ ಏರಿಕೆ ಖಂಡಿಸಿ ಟ್ವೀಟ್ ಮಾಡಿರುವ ಡಿಕೆಶಿ, ಬಿಜೆಪಿ ಸರ್ಕಾರ ನೀಡಬಹುದಾದ ಅತಿದೊಡ್ಡ ಪರಿಹಾರ ಪ್ಯಾಕೇಜ್ ಎಂದರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ತಗ್ಗಿಸುವುದು. ನಿರುದ್ಯೋಗ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂಧನ ತೆರಿಗೆಯ ಭಾರದಿಂದಾಗಿ ಮಧ್ಯಮ ವರ್ಗದ ಜನರು ತಮ್ಮ ಮಕ್ಕಳ ಯೋಗಕ್ಷೇಮವನ್ನೂ ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇನ್ನು ಕೆಲವೇ ತಿಂಗಳಿನಲ್ಲಿ ಕೊರೋನಾ ಮೂರನೇ ಅಲೆಯ ಹೊಡೆತಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ತಿಳಿದಿರುವಾಗ, ಅದರಿಂದ ಬಚಾವಾಗಲು ಸಾಧ್ಯವಿರುವ ಪ್ರತಿಯೊಂದು ಪ್ರಯತ್ನವನ್ನೂ ನಾವು ಮಾಡಬಾರದೇಕೆ? ಹಾಗಾಗಿಯೇ ಬಿಜೆಪಿಗೆ ನನ್ನ ಈ ಪ್ರಶ್ನೆ: ಕರ್ನಾಟಕದ ಎಲ್ಲ ವಯಸ್ಕರಿಗೂ ಯಾವ ಕಾಲಮಿತಿಯೊಳಗೆ ನೀವು ಲಸಿಕೆ ನೀಡಬಲ್ಲಿರಿ? ಎಂದು ಪ್ರಶ್ನಿಸಿದ್ದಾರೆ.