ಚಿಕ್ಕಮಗಳೂರು: ಬಿ.ಎಸ್. ಯಡಿಯೂರಪ್ಪ ಬಿಟ್ಟು ಬಿಜೆಪಿಯಲ್ಲಿ ಯಾರು ಸ್ಟಾರ್ ಲೀಡರ್ ಇದ್ದಾರೆ ತೋರಿಸಲಿ. ನಾಯಕತ್ವ ಬದಲಾವಣೆ, ಚರ್ಚೆ ಈಗ ಅಪ್ರಸ್ತುತ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಬಿಎಸ್ ವೈ ಪರ ಬ್ಯಾಟ್ ಬೀಸಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿ ಮಾತನಾಡಿದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, ನಾಯಕತ್ವ ಬದಲಾವಣೆ, ಚರ್ಚೆ ಈಗ ಅಪ್ರಸ್ತುತ. ಈ ಕುರಿತು ಕೇಂದ್ರದ ನಾಯಕರ ಬಳಿ ಶಾಸಕರ ನಿಯೋಗ ಹೋಗಲು ತಯಾರಿದ್ದೇವೆ. ನಾಯಕತ್ವ ಬದಲಾವಣೆ ಮಾಡದಂತೆ ಮನವಿ ಮಾಡುತ್ತೇವೆ ಎಂದರು.
ನಾಯಕತ್ವವನ್ನ ಬದಲಾಯಿಸುವುದು ದೊಡ್ಡ ವಿಚಾರವಲ್ಲ. ಬೇರೆ ಸ್ಟಾರ್ ಲೀಡರ್ ಯಾರಿದ್ದಾರೆ ತೋರಿಸಲಿ. ಅವರಿಂದ ಅಧಿಕಾರ, ಬೋರ್ಡ್ ಪಡೆದವರು ಮಾತನಾಡಬೇಕು. ಕೊರೋನಾ ಹತೋಟಿಗೆ ತರಲು ಸಿಎಂ ಹಗಲಿರುಳು ಶ್ರಮಿಸುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ನಾಯಕತ್ವದ ಬದಲಾವಣೆ ಚರ್ಚೆ ಅಪ್ರಸ್ತುತ. ಯಡಿಯೂರಪ್ಪನವರೇ ಮುಂದುವರೆಯಬೇಕು ಎಂದು ಹೇಳುತ್ತೇವೆ. ದಕ್ಷಿಣ ಭಾರತದಲ್ಲಿ 2 ಬಾರಿ ಬಿಜೆಪಿ ಅಧಿಕಾರಕ್ಕೆ ತರಲು ಯಡಿಯೂರಪ್ಪನವರೇ ಕಾರಣ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.