ಅಯೋಧ್ಯೆ,ಜು.27- ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಿಂದೂಗಳು ಮಾತ್ರವಲ್ಲದೆ ಎಲ್ಲಾ ಸಮುದಾಯಗಳಿಂದ ದೇಣಿಗೆಯನ್ನು ಸ್ವೀಕರಿಸಲಾಗುತ್ತದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರಾಗಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಇತ್ತೀಚೆಗೆ ನಡೆದ ಟ್ರಸ್ಟ್ನ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದ ಅವರು, ರಾಮ ಮಂದಿರ ನಿರ್ಮಾಣಕ್ಕೆ ತಲಾ ಹತ್ತು ರೂ. ಮತ್ತು ಮನೆಯಿಂದ 100 ರೂ. ದೇಣಿಗೆ ನೀಡಬಹುದಾಗಿದೆ. ಇದು ಕೇವಲ ಸಲಹೆ ಅಷ್ಟೇ. ತೆರಿಗೆಯಂತೆ ಅಲ್ಲ ಎಂದು ಹೇಳಿದರು.
ಶ್ರೀ ರಾಮನಲ್ಲಿ ಭಕ್ತಿ ಮತ್ತು ನಂಬಿಕೆ ಇರುವವರಲ್ಲಿ ಮಾತ್ರ ದೇಣಿಗೆ ಸ್ವೀಕರಿಸಲಾಗುತ್ತದೆಯೆ ಎಂದು ಪ್ರಶ್ನಿಸಿದಾಗ, ಎಲ್ಲಾ ಸಮುದಾಯಗಳಿಂದ ಕೊಡುಗೆಗಳನ್ನು ಸ್ವೀಕರಿಸಲಾಗುತ್ತದೆ. ಇದು ಹಿಂದೂಗಳಿಗೆ ಮಾತ್ರ ಸೀಮಿತವಾಗಿಲ್ಲ.
ಭಗವಾನ್ ರಾಮನಲ್ಲಿ ಯಾರಿಗೆ ಭಕ್ತಿ ಮತ್ತು ಗೌರವ ಮತ್ತು ನಂಬಿಕೆ ಇರುತ್ತದೆಯೋ, ಅವರ್ಯಾರೆ ಆಗಿರಲಿ ದೇಣಿಗೆ ನೀಡಬಹುದು. ಈ ಸಮುದಾಯ, ಆ ಸಮುದಾಯವೇ ಇರಬೇಕು ಎಂದು ಏನೂ ಇಲ್ಲ . ಎಂದು ಹೇಳಿದರು.
ಕಂಪೆನಿಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿಯಿಂದ ಹೆಚ್ಚುವರಿ ಹಣಕಾಸಿನ ಅವಶ್ಯಕತೆಗಳನ್ನು ಹೆಚ್ಚಿಸಲು ಟ್ರಸ್ಟ್ ಪ್ರಸ್ತಾಪಿಸಿದೆ ಎಂದು ಅವರು ಹೇಳಿದರು.
ದೇವಾಲಯ ಸಂಬಂಧಿತ ಚಟುವಟಿಕೆಗಳಿಗಾಗಿ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಸುಮಾರು 1,000 ಕೋಟಿ ರೂ. ಬೇಕಾಗುತ್ತದೆ. ನವೆಂಬರ್ 25 ರ ಸುಮಾರಿಗೆ ಒಂದು ತಿಂಗಳ ಅವಧಿಯ ನಿಧಿಸಂಗ್ರಹ ಅಭಿಯಾನವನ್ನು ನಡೆಸಲಾಗುವುದು ಎಂದು ಮಠಾಧೀಶರು ತಿಳಿಸಿದ್ದಾರೆ.