ಬೆಂಗಳೂರು: ಕೊರೊನಾ ಪರಿಕರಣಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿಲ್ಲ. ಪ್ರಮಾಣಿಕವಾಗಿ ಕೆಲಸ ಮಾಡಿದ್ದೆವೆ ಎಂದರೆ ಭಯವೇಕೆ ? ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಿ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಸವಾಲು ಹಾಕಿದ್ದಾರೆ.
ನಿನ್ನೆ ಸಚಿವ ಸುಧಾಕರ್ ಅವರ ಮಾತಿಗೆ ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, “ಪ್ರಸ್ತಾವನೆ, ಮಂಜೂರಾತಿ, ಅನುಮೋದನೆ, ವೆಚ್ಚ ಅಂದರೆ ಏನು ಎಂದು ಗೊತ್ತಿಲ್ಲದೇ ನಾನು 13 ಬಜೆಟ್ ಮಂಡಿಸಿದ್ದೇನಾ..? ನಾನು ಎಷ್ಟು ವರ್ಷ ಮಂತ್ರಿ ಆಗಿದ್ದೆ, ಉಪಮುಖ್ಯಮಂತ್ರಿ, ಸಿಎಂ ಆಗಿಯೂ ಕೆಲಸ ಮಾಡಿದ್ದೇನೆ. ಆದರೆ, ಸುಧಾಕರ್ ಎಷ್ಟು ವರ್ಷ ಸಚಿವರಾಗಿದ್ದಾರೆ? ಎಂದು ಪ್ರಶ್ನಿಸಿದ ಅವರು, ಅಧಿಕಾರದ ಅಹಂನಿಂದ ಮಾತನಾಡಬಾರದು” ಎಂದು ಸುಧಾಕರ್ ಅವರಿಗೆ ಕಿವಿಮಾತು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಕೊರೋನಾ ಅವ್ಯವಹಾರದ ಕುರಿತು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, “ಸರ್ಕಾರ ಎಂದರೆ ಸಚಿವರ ಜವಾಬ್ದಾರಿ. ಕೊರೋನಾ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ ಎಂಬುದಾದರೆ ನ್ಯಾಯಾಂಗ ತನಿಖೆ ನಡೆಸಲು ಭಯವೇಕೆ? ಈ ಅವ್ಯವಹಾರದ ಕುರಿತು ನ್ಯಾಯಾಂಗ ತನಿಖೆ ಆಗಬೇಕು ಎಂಬುದೇ ನಮ್ಮ ಬೇಡಿಕೆ. ಆದರೆ, ನಾವು ತನಿಖೆ ಮಾಡಲ್ಲ ಎಂದರೆ ಏನರ್ಥ? ತಾವು ತಪ್ಪು ಮಾಡಿಲ್ಲ ಎಂದರೆ ತನಿಖೆಗೆ ಹೆದರುವುದೇಕೆ?” ಎಂದು ಸುಧಾಕರ್ಗೆ ಪ್ರಶ್ನಿಸಿದ್ದಾರೆ.
“ಅವ್ಯವಹಾರದ ಕುರಿತು ನಾವು ಬಿಡುಗಡೆ ಮಾಡಿರುವ ದಾಖಲೆಗಳು ನಾವೇ ಸೃಷ್ಟಿಸಿದ್ದಲ್ಲ. ಅವೆಲ್ಲವೂ ಸರ್ಕಾರಿ ದಾಖಲೆಗಳು. ಕೇಂದ್ರ ಸರ್ಕಾರ ತಲಾ 4 ಲಕ್ಷಕ್ಕೆ 50,000 ವೆಂಟಿಲೇಟರ್ ಖರೀದಿಸಿ ರಾಜ್ಯಕ್ಕೆ 1,600 ವೆಂಟಿಲೇಟರ್ ಕೊಟ್ಟಿರುವುದಾಗಿ ತಿಳಿಸಿದೆ. ಹಾಗಾದರೆ ಕೇಂದ್ರ ಸರ್ಕಾರ ಖರೀದಿಸಿದ್ದು ಕಳಪೆ ವೆಂಟಿಲೇಟರ್ಗಳಾ? ಇವರು ಕೇಂದ್ರ ಕೊಟ್ಟಿರೋದು ಕಳಪೆ ಅಂತ ಹೇಳ್ತಾರಾ? ಅದು ಕಳಪೆ ಅಲ್ಲ ಎಂದಾರೆ ಇವರು ಖರೀದಿಸಿದ ವೆಂಟಿಲೇಟರ್ಗಳಿಗೆ ದುಪ್ಪಟ್ಟು ಬೆಲೆ ಏಕೆ? ಮೊದಲು ಒಂದು ಲೆಕ್ಕ ನೀಡಿದರು, ಈಗ ಇನ್ನೊಂದು ಲೆಕ್ಕ ನೀಡುತ್ತಿದ್ದಾರೆ. ಯಾಕೆ ಈ ತರ ವ್ಯತ್ಯಾಸ?
ಹೀಗಾಗಿ ಈ ಅವ್ಯವಹಾರದ ಕುರಿತು ನ್ಯಾಯಾಂಗ ತನಿಖೆಯಾಗಲಿ. ಸರಿ-ತಪ್ಪುಗಳನ್ನು ಜನರೇ ನಿರ್ಧರಿಸಲಿ” ಎಂದು ಸಿದ್ದರಾಮ್ಯಯ ಅಭಿಪ್ರಾಯಪಟ್ಟಿದ್ದಾರೆ