ಬೆಂಗಳೂರು: ‘ನಿಲುಗಡೆ ನಿರ್ಬಂಧಿಸಿರುವ ಸ್ಥಳಗಳಲ್ಲಿ ನಿಲ್ಲಿಸಿರುವ ವಾಹನಗಳ ಟೋಯಿಂಗ್ ಮಾಡುವ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಹಿರಿಯ ಅಧಿಕಾರಿಗಳು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯ ಘಟಕದ ವಿ.ಆರ್. ಮರಾಠೆ ಒತ್ತಾಯಿಸಿದರು.
‘ಟೋಯಿಂಗ್ ಮಾಡಲು ಬಳಸುವ ವಾಹನಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳ ಅನುಮತಿ ಪಡೆಯದೆ ಅತಿ ಹೆಚ್ಚು ಮಾರ್ಪಾಡು ಮಾಡಿ ಕಾನೂನುಬಾಹಿರವಾಗಿ ಬಳಸಲಾಗುತ್ತದೆ. ಸಂಚಾರ ಪೊಲೀಸ್ ಅಧಿಕಾರಿಗಳಾಗಲಿ, ಸಾರಿಗೆ ಇಲಾಖೆ ಅಧಿಕಾರಿಗಳಾಗಲಿ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ಮೋಟಾರು ವಾಹನ ಕಾಯ್ದೆ 1988ರ ಕಲಂ 52 (1)ರ ಪ್ರಕಾರ ಯಾವುದೇ ರೀತಿಯ ವಾಹನಗಳನ್ನು ನೋಂದಣಿ ಪ್ರಮಾಣ ಪತ್ರದಲ್ಲಿನ ಮಾನದಂಡಗಳಿಗೆ ವ್ಯತಿರಿಕ್ತವಾಗಿ ಮಾರ್ಪಾಡು ಮಾಡುವಂತಿಲ್ಲ’ ಎಂದೂ ಹೇಳಿದರು.
‘ನಿಯಮದ ಪ್ರಕಾರ ಟೋಯಿಂಗ್ ವಾಹನಗಳಲ್ಲಿ ಒಂದು ಬಾರಿಗೆ ಗರಿಷ್ಠ 4 ವಾಹನಗಳನ್ನು ಟೋಯಿಂಗ್ ಮಾಡಲು ಅವಕಾಶವಿದೆ. ಆದರೆ, ಈ ವಾಹನಗಳನ್ನು ಮಾರ್ಪಾಡು ಮಾಡಿ ಒಂದು ಬಾರಿಗೆ 8, 9 ವಾಹನಗಳನ್ನು ತುಂಬಲಾಗುತ್ತಿದೆ. ಗಾಡಿಗೆ ಹಾನಿಯಾಗಿರುವುದನ್ನು ಮಾಲೀಕರು ಪ್ರಶ್ನಿಸಿದರೆ ಸಿಬ್ಬಂದಿ ಗೂಂಡಾಗಳ ರೀತಿ ವರ್ತಿಸುತ್ತಾರೆ. ದಂಡದ ಪ್ರಮಾಣ ಹೆಚ್ಚು ಮಾಡಲಾಗಿದೆ. ವಿನಾಕಾರಣ ವಾಹನಗಳನ್ನು ತೆಗೆದುಕೊಂಡು ಹೋಗುತ್ತಾರೆ. ಪರೋಕ್ಷವಾಗಿ ಭ್ರಷ್ಟಾಚಾರ ಎಸಗಲಾಗುತ್ತಿದೆ’ ಎಂದು ಅವರು ದೂರಿದರು.