ಬೆಂಗಳೂರು: 2ಎ ಮೀಸಲಾತಿಗೆ ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಸಮುದಾಯ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾವೇಶದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಕಣ್ಣೀರಿಟ್ಟ ಘನಟೆ ನಡೆದಿದೆ.
ಕಾರ್ಯಕ್ರಮ ಆರಂಭವಾಗಿ ಕೆಲ ಹೊತ್ತಿನ ನಂತರ ವೇದಿಕೆಯ ಮುಂಬಾಗಕ್ಕೆ ಶಿವಲೀಲಾ ಕುಲಕರ್ಣಿ ಅವರನ್ನು ಸಂಘಟಕರು ಕರೆ ತಂದರು. ಈ ವೇಳೆ ಸಂಘಟಕರು ಶಿವಲೀಲಾ ಅವರಿಗೆ ಮೈಕ್ ಕೊಟ್ಟು ಮಾತನಾಡಲು ಹೇಳಿದರು. ಆದರೆ ಅವರು ಕಣ್ಣೀರಿಡುವ ಮೂಲಕ ಮಾತನಾಡಲು ನಿರಾಕರಿಸಿದರು.
ಈ ವೇಳೆ ಮಾತನಾಡಿದ ವಚನಾನಂದ ಸ್ವಾಮಿ, ವಿನಯ್ ಕುಲಕರ್ಣಿ ಆರೋಪಿ ಮಾತ್ರ. ಅಪರಾಧಿ ಅಲ್ಲ. ನಾನು ಪಾದಯಾತ್ರೆಯಲ್ಲಿ ಭಾಗವಹಿಸಲು ಪ್ರೇರಿಪಿಸಿದ್ದೇ ವಿನಯ ಕುಲಕರ್ಣಿ. ಅವರ ಕುಟುಂಬದ ಬೆಂಬಲಕ್ಕೆ ಪಂಚಮಸಾಲಿ ಸಮುದಾಯ ಇರುತ್ತದೆ. ವಿನಯ್ ಕುಲಕರ್ಣಿ ಆರೋಪ ಮುಕ್ತರಾಗಿ ಬರುತ್ತಾರೆ. ಪಂಚಮಸಾಲಿ ಸಮುದಾಯದ ಶ್ರೇಷ್ಠ ನಾಯಕ ಎಂದು ಹೇಳಿದರು.
ಈ ವೇಳೆ ವಿನಯ ಕುಲಕರ್ಣಿ ಮಗಳು ಕೂಡ ಹಾಜರಿದ್ದಳು. ಶಿವಲೀಲಾ ಕುಲಕರ್ಣಿ ಅವರನ್ನು ವೀಣಾ ಕಾಶಪ್ಪನವರ ಸಮಾಧಾನ ಮಾಡಿದರು. 2016 ರಲ್ಲಿ ಧಾರವಾಡದಲ್ಲಿ ಬಿಜೆಪಿಯಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗಿಶಗೌಡ ಗೌಡರ್ ಕೊಲೆಯಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ವಿನಯ್ ಕುಲಕರ್ಣಿಯನ್ನು ಬಂಧಿಸಿದೆ. ಸದ್ಯ ಅವರು ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.