ಮೈಸೂರು: ಬಹುನಿರೀಕ್ಷಿತ, ಬಹು ಅಗತ್ಯವಿದ್ದ ಮೈಸೂರು-ಚಾಮರಾಜನಗರ ರೈಲು ಮಾರ್ಗ ಎಲೆಕ್ಟ್ರಿಫಿಕೇಷನ್ ಕಾಮಗಾರಿಗೆ ಶೀಘ್ರವೇ ಚಾಲನೆ ದೊರೆಯಲಿದೆ.
ಕಾಮಗಾರಿಗೆ ಗುತ್ತಿಗೆಯನ್ನು ನೀಡಲಾಗಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ರೈಲ್ವೆ ವಿದ್ಯುದೀಕರಣಕ್ಕಾಗಿ ಇರುವ ಕೇಂದ್ರ ಕಚೇರಿಯ ಮುಖ್ಯ ಯೋಜನಾ ನಿರ್ದೇಶಕ ಆರ್ ಎ ಚೌಧರಿ ವಿದ್ಯುದೀಕರಣ ಕಾಮಗಾರಿ 12 ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ, ಫೆ.1 ರಂದು ಮಂಡನೆಯಾದ ಬಜೆಟ್ ನಲ್ಲಿ ಇದಕ್ಕಾಗಿ ಅನುದಾನವನ್ನೂ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಗೆ 18.89 ಕೋಟಿ ರೂಪಾಯಿಗಳ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸುಮಾರು 71 ಕಿ.ಮೀ ಉದ್ದದ ವಿದ್ಯುದೀಕರಣ ಯೋಜನೆ ಇದಾಗಿದ್ದು, ಈ ಮಾರ್ಗದಲ್ಲಿ ಕಚೇರಿಗೆ ತೆರಳುವವರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವುದರಿಂದ ರೈಲುಗಳ ಸಂಚಾರ ವೇಗವಾಗಿರುವುದಕ್ಕೆ ಹಾಗೂ MEMU ಸೇವೆಗಳನ್ನು ಒದಗಿಸುವುದಕ್ಕೆ ಸಹಕಾರಿಯಾಗಲಿದೆ.
ಕಡಕೊಳದ ಬಳಿ ಸ್ಥಾಪನೆಯಾಗುತ್ತಿರುವ ಇನ್ಲ್ಯಾಂಡ್ ಕಂಟೇನರ್ ಟರ್ಮಿನಲ್ ಜೊತೆಗೆ CONCOR ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ ನ ದೃಷ್ಟಿಯಿಂದಲೂ ಈ ವಿದ್ಯುದೀಕರಣ ಯೋಜನೆ ಮಹತ್ವ ಪಡೆದುಕೊಂಡಿದೆ.