ಬೆಳಗಾವಿ,ಫೆ.7-ಮರಾಠಿ ಮಾತನಾಡದ ಕಾರಣಕ್ಕಾಗಿ ಮಹಾರಾಷ್ಟ್ರದಲ್ಲಿ ಕನ್ನಡಿಗ ಲಾರಿ ಚಾಲಕನ ಮೇಲೆ ಪುಂಡರ ಗುಂಪೊಂದು ಹಲ್ಲೆ ಮಾಡಿದ್ದು, ಈ ಸಂಬಂಧ ನಾಲ್ಕು ಮಂದಿ ಬಂಸಲಾಗಿದೆ. ಮಹಾರಾಷ್ಟ್ರದ ಸತಾರಾ ಟೋಲ್ ಬಳಿ ಈ ಘಟನೆ ನಡೆದಿದ್ದು, ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಲಕ್ಕೇನಹಳ್ಳಿ ನಿವಾಸಿ ಲಾರಿ ಚಾಲಕ ಗೋವಿಂದರಾಜು ಹಲ್ಲೆಗೊಳಗಾಗಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗಡಿ ವಿವಾದವನ್ನು ಕೆಣಕಿ ಎರಡೂ ರಾಜ್ಯಗಳ ನಡುವಿನ ಸಂಬಂಧಕ್ಕೆ ಹುಳಿ ಹಿಂಡಿದ ಬೆನ್ನಲ್ಲೇ ಕನ್ನಡಿಗ ಲಾರಿ ಚಾಲಕನ ಮೇಲೆ ಹಲ್ಲೆ ನಡೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಚಲನಚಿತ್ರ ನಟ ಅರುಣ್ ಸಾಗರ್ ಅವರ ಸಹೋದರನ ಅರುಣ್ ಸಾಗರ್ ರೋಡ್ಲೈನ್ಸ್ನಲ್ಲಿ ಗೋವಿಂದರಾಜು ಕೆಲಸ ಮಾಡುತ್ತಿದ್ದು, ಕೊರಿಯರ್ ಸೇರಿದಂತೆ ಎಲ್ಲ ರೀತಿಯ ಸರಕುಗಳನ್ನು ಗುಜರಾತಿನ ಅಹಮದಬಾದ್ ಮತ್ತು ಬೆಂಗಳೂರು ನಡುವೆ ಸಾಗಿಸುತ್ತಿದ್ದಾರೆ.ಶುಕ್ರವಾರ ಸಂಜೆ 8 ಗಂಟೆ ಸುಮಾರಿಗೆ ಸತಾರಾ ಟೋಲ್ ದಾಟಿದ ಬಳಿಕ ವ್ಯಕ್ತಿಯೊಬ್ಬ ಲಾರಿಯನ್ನು ನಿಲ್ಲಿಸುವಂತೆ ಸೂಚಿಸಿದ್ದಾನೆ. ಪೊಲೀಸರಿರಬೇಕು ಎಂದು ಗೋವಿಂದರಾಜು ಲಾರಿಯನ್ನು ನಿಲ್ಲಿಸಿದ್ದಾರೆ. ಆತ ದಾಖಲೆಗಳು, ಚಾಲನ ಪರವಾನಗಿಯನ್ನು ಕೇಳಿದ್ದಾನೆ. ಅದನ್ನು ಕೊಟ್ಟ ಮೇಲೆ ಟ್ರಕ್ನ್ನ ಕೀಯನ್ನು ಕಿತ್ತುಕೊಂಡಿದ್ದಾನೆ. ಆತ ಮರಾಠಿಯಲ್ಲಿ ಸಂಭಾಷಣೆ ನಡೆಸುತ್ತಿದ್ದು, ಗೋವಿಂದರಾಜು ಕನ್ನಡದೇ ಪ್ರತಿಕ್ರಿಯಿಸಿದ್ದಾರೆ.
ಹಿಂದಿ ಅಥವಾ ಮರಾಠಿಯಲ್ಲೇ ಉತ್ತರಿಸುವಂತೆ ಆತ ಒತ್ತಾಯಿಸಿದ್ದು, ನನಗೆ ಬರುವುದಿಲ್ಲ ಎಂದಾಗ, ಕನ್ನಡ ಆದ್ಮಿಯೇ ಕ್ಯಾ? ಪಾಗಲ್ ಎಂದಿದ್ದಾನೆ. ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಬೇಡ ಎಂದು ಗೋವಿಂದರಾಜು ಹೇಳುತ್ತಿದ್ದಂತೆ ಆತ ತಿರುಗಿಬಿದ್ದಿದ್ದು, ಟೋಲ್ ಬಳಿ ಹೋಗಿ ಮತ್ತೆ ಮೂರು ಮಂದಿಯನ್ನು ಕರೆತಂದಿದ್ದಾನೆ. ಅವರಲ್ಲಿ ಒಬ್ಬ ಏಕಾಏಕಿ ಹಲ್ಲೆ ಮಾಡಿದ್ದು, ಗೋವಿಂದರಾಜು ಪೆಟ್ಟಿನಿಂದ ತತ್ತರಿಸಿ ಹೋಗಿದ್ದಾರೆ.
ಕೆಲ ಕಾಲ ಅಲ್ಲೆ ಅಸಹಾಯಕ ಸ್ಥಿತಿಯಲ್ಲಿ ಅಳುತ್ತಾ ಕುಳಿತಿದ್ದು, ಸುಧಾರಿಸಿಕೊಂಡು ಲಾರಿ ಮಾಲೀಕರಿಗೆ ಫೋನ್ ಮಾಡಿದ್ದಾರೆ. ಲಾರಿ ಮಾಲೀಕರು ಹಲ್ಲೆ ನಡೆಸಿದವರ ಜೊತೆ ಮಾತನಾಡಿ, ದಾಖಲಾತಿಗಳಲ್ಲಿ ದೋಷವಿದ್ದರೆ ನೀವು ಲಾರಿಯನ್ನು ಜಪ್ತಿ ಮಾಡಿ. ಚಾಲಕನ ಮೇಲೆ ಹಲ್ಲೆ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಆರಂಭದಲ್ಲಿ 10 ಸಾವಿರ ರೂ. ಕೇಳಿದ್ದ ಪುಂಡರ ಗುಂಪು ನಂತರ 5 ಸಾವಿರಕ್ಕೆ ಚೌಕಾಸಿ ಮಾಡಿದೆ. ದುಡ್ಡು ಕೊಡುವಂತೆ ಬಹಳ ಒತ್ತಾಯಿಸಿ ಕೊನೆಗೆ ಹಣ ಸಿಗುವುದಿಲ್ಲ ಎಂದು ಗೊತ್ತಾದಾಗ ದಾಖಲಾತಿ ಮತ್ತು ಕೀಯನ್ನು ವಾಪಸ್ ಕೊಟ್ಟು ಇಲ್ಲಿಂದ ಹೊರಡು ಎಂದು ಗದರಿಸಿಕಳುಹಿಸಿದ್ದಾರೆ.