ಚಿಕ್ಕೋಡಿ(ಬೆಳಗಾವಿ): ನಮಾಜ್ ಮಾಡಲು ಅವಕಾಶ ಕೇಳಿದ ಮುಸ್ಲಿಂ ಮುಖಂಡರ ಮೇಲೆ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಗರಂ ಆಗಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.
ಹುಕ್ಕೇರಿ ತಾಲೂಕಿನಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಹುಕ್ಕೇರಿ ಪಟ್ಟಣದಲ್ಲಿ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ತುರ್ತು ಸಭೆ ನಡೆಸಿದ್ದಾರೆ. ಈ ವೇಳೆ ಅಭಿಪ್ರಾಯ ಸಂಗ್ರಹಿಸಿ ಒಂದು ವಾರ ಹುಕ್ಕೇರಿ ತಾಲೂಕು ಲಾಕ್ಡೌನ್ ಮಾಡಲು ತೀರ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕೆಲ ಮುಸ್ಲಿಂ ಮುಖಂಡರು ನಮಾಜ್ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ಮನವಿ ಮಾಡಿದವರ ಮೇಲೆ ಶಾಸಕರು ಗರಂ ಆಗಿದ್ದು, ಕೊರೊನಾ ಮಹಾಮಾರಿ ಮಧ್ಯೆ ಮಸೀದಿ ಆರಂಭ ಮಾಡಿ ಸಾಯಬೇಕಾ?, ಮಸೀದಿಗೆ ಹೋಗಿ ‘ಅಲ್ಲಾ.. ಅಲ್ಲಾ’ ಎಂದು ಪ್ರಾರ್ಥನೆ ಮಾಡಿದರೆ ನೀವೇನೂ ಉಳಿಯುವುದಿಲ್ಲ. ಎಲ್ಲರೂ ಒಂದು ದಿನ ಸಾಯೋದೇ. ನಾನು ಸಾಯಬೇಕು ನೀನು ಸಾಯಬೇಕು. ‘ಅಲ್ಲಾ.. ಅಲ್ಲಾ’ ಅನ್ನೋದನ್ನು ನಾಲ್ಕು ದಿನ ನಿಲ್ಲಿಸಿ ಲಾಕ್ಡೌನ್ಗೆ ಸಹಕಾರ ನೀಡಿ ಎಂದು ಮರು ಮನವಿ ಮಾಡಿಕೊಂಡರು.
ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಲಾಕ್ಡೌನ್ ಗೆ ಸಹಕಾರ ನೀಡುವಂತೆ ಉಮೇಶ್ ಕತ್ತಿ ಮನವಿ ಮಾಡಿಕೊಂಡರು. ಮುಂದಿನ ಸೋಮವಾರ ಅಂದರೆ ಜುಲೈ 20ರಿಂದ ಜುಲೈ 27ರ ಸೋಮವಾರದವರೆಗೆ ಒಂದು ವಾರಗಳ ಕಾಲ ಹುಕ್ಕೇರಿ ತಾಲೂಕು ಸಂಪೂರ್ಣ ಲಾಕ್ಡೌನ್ ಮಾಡುವಂತೆ ಅಧಿಕಾರಿಗಳಿಗೆ ಕತ್ತಿ ಸೂಚನೆ ನೀಡಿದರು. ಹೀಗಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕನ್ನು ಒಂದು ವಾರಗಳ ಕಾಲ ಲಾಕ್ ಡೌನ್ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.