ಕೋವಿಡ್ ಸೋಂಕು ತಡೆ ಹೆಸರಿನಲ್ಲಿ ಬಂದ್ ಮಾಡಿರುವ ಹಿಂದೂ ದೇವಾಲಯಗಳನ್ನು ತೆರೆದು ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು, ಹಿಂದೂ ದೇವತೆಗಳಿಗೆ ಅಪಮಾನ ಮಾಡುವಂತೆ ಚಿತ್ರೀಕರಿಸಿರುವ ತಾಂಡವ ಹಿಂದಿ ಚಲನಚಿತ್ರವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನಾ ಹಿಂದೂಸ್ತಾನ್ ಸಂಘಟನೆಯ ಮುಖಂಡರು, ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಶ್ರೀರಾಮ ಸೇನಾ ಹಿಂದೂಸ್ತಾನ್ ಸಂಘಟನೆಯ ಮುಖಂಡರು, ಕಾರ್ಯಕರ್ತರು ಸರಕಾರದ ವಿರುದ್ಧ ಘೋಷಣೆ ಕೂಗಿದರು. ಸಮಾವೇಶ, ಚುನಾವಣೆ, ಸಭೆ, ಸಮಾರಂಭಗಳಿಗೆ ಅವಕಾಶ ನೀಡುವ ಸರಕಾರ, ಬೆಳಗಾವಿ ಜಿಲ್ಲೆಯ ಜಾಗೃತ ಕ್ಷೇತ್ರಗಳಾದ ಯಲ್ಲಮ್ಮನಗುಡ್ಡ, ಜೋಗುಳಭಾವಿ, ಚಿಂಚಲಿ ಮಾಯಕ್ಕ ದೇವಿ ಸೇರಿ ಹಲವು ದೇವಸ್ಥಾನಗಳನ್ನು ಬಂದ್ ಮಾಡಿ ಹಿಂದೂ ಜನರ ಅಸಮಾಧಾನಕ್ಕೆ ಅವಕಾಶ ಒದಗಿಸಿದೆ. ಕೂಡಲೇ ಮಂದಿರಗಳ ಬಾಗಿಲು ಮುಚ್ಚುವ ಆದೇಶವನ್ನು ಹಿಂದಕ್ಕೆ ಪಡೆದು ಭಕ್ತರಿಗೆ ನಿಯಮ ಪಾಲಿಸಿ ದರ್ಶನ ಪಡೆದುಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಶ್ರೀರಾಮ ಸೇನಾ ಹಿಂದೂಸ್ತಾನ್ ಸಂಘಟನೆಯ ಮುಖಂಡ ರಮಾಕಾಂತ ಕೋಂಡುಸ್ಕರ್ ಮಾತನಾಡಿ, ಸರಕಾರ ಯಲ್ಲಮ್ಮನಗುಡ್ಡ, ಜೋಗುಳಭಾವಿ, ಚಿಂಚಲಿ ಮಾಯಕ್ಕ ದೇವಿ ಸೇರಿ ಹಲವು ದೇವಸ್ಥಾನಗಳನ್ನು ಬಂದ್ ಮಾಡಿದೆ. ಕೂಡಲೇ ಮಂದಿರಗಳ ಬಾಗಿಲು ತೆರೆಯಲು ಮುಂದಾಗಬೇಕು. ನಿಯಮ ಪಾಲಿಸಿ ದರ್ಶನ ಪಡೆದುಕೊಳ್ಳಲು ಭಕ್ತರಿಗೆ ಅವಕಾಶ ಕಲ್ಪಿಸಬೇಕು. ಜೊತೆಗೆ ಹಿಂದೂ ದೇವತೆಗಳಿಗೆ ಅವಮಾನ ಮಾಡುವಂತೆ ಚಿತ್ರೀಕರಿಸಿರುವ ತಾಂಡವ ಚಿತ್ರವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಶ್ರೀರಾಮ ಸೇನಾ ಹಿಂದೂಸ್ತಾನ್ ಸಂಘಟನೆಯ ಪ್ರಮುಖರು, ಕಾರ್ಯಕರ್ತರು ಇದ್ದರು.