ಎಂಇಎಸ್ ಮುಖಂಡರಿಗೆ ಮರಾಠಿ, ಮಹಾರಾಷ್ಟ್ರ ಬೇಕು ಎನ್ನುವುದಾದ್ರೆ ಉದ್ಧವ್ ಠಾಕ್ರೆ ಹತ್ತಿರ ಹೋಗಬೇಕು. ಇನ್ನು 15 ದಿನಗಳಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬ್ಯಾನ್ ಮಾಡಿ, ಕರ್ನಾಟಕ ಏಕೀಕರಣ ಸ್ಥಾಪಿಸಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದರು.
ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉದ್ಧಟತನ ಹೇಳಿಕೆ ಹಾಗೂ ಶಿವಸೇನೆ, ಎಂಇಎಸ್ ಪುಂಡಾಟ ಖಂಡಿಸಿ ಬೆಳಗಾವಿಯ ರಾಣಿ ಚನ್ನಮ್ಮಾಜಿ ವೃತ್ತದಲ್ಲಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಉದ್ಧವ್ ಠಾಕ್ರೆ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡುವ ಮೂಲಕ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಇದೇ ವೇಳೆ ನಮ್ಮದು ನಮ್ಮದು ಬೆಳಗಾವಿ ನಮ್ಮದು ಎಂದು ಘೋಷಣೆ ಕೂಗಿದ್ದು ಕಂಡು ಬಂತು.
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಹೋರಾಟಗಾರರು ಚನ್ನಮ್ಮಾಜಿ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನೆಗೆ ತಡೆಯೊಡ್ಡಿದರು. ಈ ವೇಳೆ ಪೊಲೀಸರು ಮತ್ತು ಕನ್ನಡ ಹೋರಾಟಗಾರರ ಮಧ್ಯ ತೀವ್ರ ವಾಗ್ವಾದ ನಡಿತು. ಕಡೆಗೆ ವಾಟಾಳ್ ನಾಗರಾಜ್ ಹಾಗೂ ವಿವಿಧ ಕನ್ನಡಪರ ಸಂಘಟನೆ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಬೆಳಗಾವಿಯನ್ನು ಕರ್ನಾಟಕ ಸರ್ಕಾರ ಕೈ ಬಿಟ್ಟಿದೆ. ರಕ್ಷಣಾ ಕಾರ್ಯ, ಅಭಿವೃದ್ಧಿ ಆಗಬೇಕಿತ್ತು ಅದು ಆಗಿಲ್ಲ. ಬೆಳಗಾವಿ, ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗ. ಗಡಿಯಲ್ಲಿ ನುಗ್ಗಿ ಪುಂಡಾಟ ಮೆರೆಯುತ್ತಿದ್ದ ಶಿವಸೇನೆಯವರ ವಿರುದ್ಧ ಎಫ್ಐಆರ್ ಹಾಕಿ, ಜೈಲಿನಲ್ಲಿ ಇಡಬೇಕಾಗಿತ್ತು. ಅವರನ್ನು ಸುಮ್ಮನೆ ಬಿಟ್ಟು ಕಳಿಸಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು 15 ದಿನಗಳೊಳಗೆ ಎಂಇಎಸ್ ಸಂಘಟನೆ ವಜಾ ಮಾಡಬೇಕು. ಎಂಇಎಸ್ ಮುಖಂಡರಿಂದ ಮುಚ್ಚಳಿಕೆ ಬರೆಸಿಕೊಳ್ಳಬೇಕು. ನೀವು ಮರಾಠಿ ಪರ ಮಾತನಾಡಕೂಡದು, ನೀವು ಮಾತನಾಡಿದ್ರೆ ಮಹಾರಾಷ್ಟ್ರಕ್ಕೆ ಹೋಗಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಯಡಿಯೂರಪ್ಪ ವಿರುದ್ಧವೂ ವಾಗ್ದಾಳಿ ಮಾಡಿದ ವಾಟಾಳ್ ನಾಗರಾಜ್ ಯಡಿಯೂರಪ್ಪ ಈ ರಾಜ್ಯವನ್ನು ಈ ನಾಶ ಮಾಡುತ್ತಿದ್ದಾರೆ. ಅವರಿಗೆ ಗಡಿನಾಡು ಬೇಕಿಲ್ಲ. ಯಡಿಯೂರಪ್ಪ ಈ ರಾಜ್ಯದ ಅತ್ಯಂತ ಅನಿಷ್ಠ ಮುಖ್ಯಮಂತ್ರಿ, ಈ ರಾಜ್ಯಕ್ಕೆ ಯಡಿಯೂರಪ್ಪ ವರವಾಗುವ ಬದಲು ಶಾಪವಾಗಿದ್ದಾರೆ. ಎಂಇಎಸ್ ಸಂಘಟನೆ ವಜಾ ಆಗಬೇಕು, ಕರ್ನಾಟಕ ಏಕೀಕರಣ ಸಮಿತಿ ರಚನೆ ಮಾಡಬೇಕು ಇಲ್ಲದೇ ಹೋದ್ರೆ ರಾಜ್ಯಾಧ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಾರಾ ಗೋವಿಂದು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ನೂರಾರು ಮುಖಂಡರು ಭಾಗಿಯಾಗಿದ್ದರು.