ಬೆಂಗಳೂರು: ಲಾಕ್ಡೌನ್ ನಂತರ ‘ಕನ್ನಡತಿ’ ರಂಜನಿ ರಾಘವನ್ ಬಹಳ ಬ್ಯುಸಿಯಾಗಿದ್ದಾರೆ. ಒಂದು ಕಡೆ ಕಿರುತೆರೆಯ ಧಾರಾವಾಹಿಯಾದರೆ, ಇನ್ನೊಂದು ಕಡೆ ಸಿನಿಮಾಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ರಂಜನಿ, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣ ಇಲ್ಲ’ ಎಂಬ ದಿಗಂತ್ ಅಭಿನಯದ ಚಿತ್ರ ಮುಗಿಸಿದ್ದಾರೆ. ಇದೀಗ ಅವರು ಸಂಚಾರಿ ವಿಜಯ್ ಜತೆಗೆ ‘ಅವಸ್ಥಾಂತರ’ ಎಂಬ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಸಂಚಾರಿ ವಿಜಯ್ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.
‘ಅವಸ್ಥಾಂತರ’ ಚಿತ್ರವು ಈಗಾಗಲೇ ಪ್ರಾರಂಭವಾಗಿದ್ದು, ಈ ಚಿತ್ರದಲ್ಲಿ ಪ್ರೀತಿ ಎಂಬ ಯುವತಿಯ ಪಾತ್ರ ಮಾಡುತ್ತಿರುವುದಾಗಿ ರಂಜನಿ ಹೇಳುತ್ತಾರೆ. ‘ನಿರ್ದೇಶಕರು ಬಂದು ಈ ಪಾತ್ರಕ್ಕೆ ನೀವೇ ಸೂಕ್ತ ಎಂದರು. ಈ ಪಾತ್ರ ನನ್ನ ರಿಯಲ್ ಲೈಫ್ಗೆ ಬಹಳ ಹತ್ತಿರವಾಗಿದೆ. ನಾನು ಸಹ ಸಾಂಪ್ರದಾಯಿಕ ಕುಟುಂಬದಿಂದ ಬಂದವಳು. ಇಲ್ಲಿ ನನ್ನ ಪಾತ್ರವೂ ಹಾಗೆಯೇ ಇದೆ. ಅದೊಂದು ದಿನ ನಾಯಕನ ಪರಿಚಯವಾಗುತ್ತದೆ. ಆ ನಂತರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದೇ ಕಥೆ’ ಎನ್ನುತ್ತಾರೆ ರಂಜನಿ. ಇದೊಂದು ಲಘುವಾದ ಕಾಮಿಡಿ ಚಿತ್ರ ಎನ್ನುವ ಸಂಚಾರಿ ವಿಜಯ್, ‘ಮನುಷ್ಯನಿಗೆ ವಯಸ್ಸಾದಂತೆ ದೈಹಿಕ ಕಾಮನೆಗಳು ಹೆಚ್ಚಾಗುತ್ತದೆ.
ಹೆಣ್ಣಿನ ಸಂಪರ್ಕವೇ ಇಲ್ಲದ ಸಾಂಪ್ರದಾಯಿಕ ಕುಟುಂಬದ ಹುಡುಗನೊಬ್ಬ ಏನೆಲ್ಲ ಅನುಭವಿಸುತ್ತಾನೆ ಎನ್ನುವುದೇ ಈ ಚಿತ್ರದ ಸಾರಾಂಶ. ಇಲ್ಲಿ ಕಥೆಗಿಂಥ ಸನ್ನಿವೇಶಗಳು ಬಹಳ ಮುಖ್ಯ. ಸನ್ನಿವೇಶಗಳು ಹೇಗೆ ಫಜೀತಿ ಸೃಷ್ಟಿ ಮಾಡುತ್ತದೆ ಎಂಬುದು ಹಾಸ್ಯಮಯವಾಗಿ ತೋರಿಸುವ ಸಿನಿಮಾ’ ಎನ್ನುತ್ತಾರೆ ವಿಜಯ್. ಇನ್ನು, ಬಾಡಿಬಿಲ್ಡಿಂಗ್ನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ದಿಶಾ ಕೃಷ್ಣಯ್ಯ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರವನ್ನು ದೀಪಕ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.