ನಟ ಪುನೀತ್ ರಾಜ್ಕುಮಾರ್ ಅವರು ಇಂದು ದಾವಣಗೆರೆಯ ಪ್ರಸಿದ್ಧ ಹರಜಾತ್ರೆ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪುನೀತ್ ಅವರನ್ನು ನೋಡಲು ಜನಸಾಗರವೇ ಹರಿಬಂದಿತ್ತು.
ಶಾಸಕ, ನಿರ್ಮಾಪಕ ಮುನಿರತ್ನ ಅವರೊಟ್ಟಿಗೆ ಪುನೀತ್ ರಾಜ್ಕುಮಾರ್ ಅವರು ದಾವಣಗೆರೆಗೆ ತೆರಳಿದ್ದರು. ಪುನೀತ್ ಬರುತ್ತಿರುವ ವಿಷಯ ತಿಳಿದು ಕಾಲೇಜು ಯುವಕ-ಯುವತಿಯರು ನೂರಾರು ಮಂದಿ ಹೆಲಿಪ್ಯಾಡ್ಗೆ ಆಗಮಿಸಿದ್ದರು.
ಅಲ್ಲಿಂದ ಕಾರ್ಯಕ್ರಮಕ್ಕೆ ತೆರಳಿದ ಪುನೀತ್ ವಚನಾನಂದ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದು, ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಾತ್ರೆ ಕಾರ್ಯಕ್ರಮಕ್ಕೆ ಆಗಮಿಸಿದ ಪುನೀತ್ ಅನ್ನು ನೋಡಲು ಭಾರಿ ನೂಕು-ನುಗ್ಗಲು ಉಂಟಾಯಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯ್ತು.
ಹರಿಹರ ಜಾತ್ರಾ ಕಾರ್ಯಕ್ರಮದಲ್ಲಿ ಹಲವಾರು ಮಂದಿ ರಾಜಕಾರಣಿಗಳು, ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ನಿನ್ನೆಯಷ್ಟೆ ಸಿಎಂ ಯಡಿಯೂರಪ್ಪ ಅವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಲವು ಮಂದಿ ಸಚಿವರುಗಳ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ಅವರು ಹೋದಲ್ಲೆಲ್ಲಾ ಅಭಿಮಾನಿಗಳು ಸುತ್ತುವರೆಯುವುದು ಮಾಮೂಲು. ಕೆಲವು ದಿನಗಳ ಹಿಂದೆ ಕುಮುಟಾಕ್ಕೆ ಮದುವೆಗೆ ಬಂದಿದ್ದ ಪುನೀತ್ ಅವರನ್ನು ನೋಡಲು ಸಾವಿರಾರು ಮಂದಿ ಮದುವೆ ಮಂಟಪದ ಮುಂದೆ ಜಮಾಯಿಸಿಬಿಟ್ಟಿದ್ದರು. ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯ್ತು.