ಗಂಗಾವತಿ: ಕಸದಿಂದ ರಸ ಹೇಗೆ ತೆಗೆಯಬೇಕು ಎಂಬುದನ್ನು ಚೆನ್ನಾಗಿ ಕರಗತ ಮಾಡಿಕೊಂಡಿರುವ ತಾಲ್ಲೂಕಿನ ಆನೆಗೊಂದಿ ಭಾಗದ ಮಹಿಳೆಯರು, ಸ್ಥಳೀಯವಾಗಿ ಲಭ್ಯವಾಗುವ ಬಾಳೆ ನಾರಿನಿಂದ ಆಕರ್ಷಕ ಪರಿಸರಸ್ನೇಹಿ ದಿನಬಳಕೆಯ ವಸ್ತುಗಳನ್ನು ತಯಾರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದ್ದರು.
ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು, ಹನುಮಮಾಲೆ ಸಂದರ್ಭದಲ್ಲಿ ಭಕ್ತರು ವ್ರತ ಮುಗಿದ ಬಳಿಕ ಎಲ್ಲೆಂದರಲ್ಲಿ ಬಿಸಾಡಿದ್ದ ಕಷಾಯ ಬಟ್ಟೆಗಳನ್ನು ಸಂಗ್ರಹಿಸಿ ಹೊಸ ರೂಪ ನೀಡಿ ಮತ್ತೆ ದಿನಬಳಕೆಯ ವಸ್ತುವನ್ನಾಗಿ ಪರಿವರ್ತಿಸುತ್ತಿದ್ದಾರೆ.
ಕೈಚೀಲಗಳ ತಯಾರಿಕೆ: ಡಿ.2 ಮತ್ತು 3ರಂದು ನಡೆದ ಹನುಮಮಾಲೆ ಅಭಿಯಾನದ ಭಾಗವಾಗಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಮಾಲಾಧಾರಿ ಭಕ್ತರು ವ್ರತ ವಿರಮಣ ಮಾಡಿ ತಾವು ತೊಟ್ಟಿದ್ದ ಕಷಾಯ ಬಟ್ಟೆಗಳನ್ನು ಎಸೆದು ಹೋಗಿದ್ದರು.
ತುಂಗಭದ್ರಾ ನದಿ ದಂಡೆಯುದ್ದಕ್ಕೂ ಸಣಾಪುರ ಮತ್ತು ಆನೆಗೊಂದಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಸಾಡಿದ್ದ ಕಷಾಯ ಬಟ್ಟೆಗಳನ್ನು ಕಲೆಹಾಕಿದ ಸಂಜೀವಿನಿ ಒಕ್ಕೂಟದ ಮಹಿಳೆಯರು, ಅವುಗಳನ್ನು ಶುಭ್ರ, ಸ್ವಚ್ಛಗೊಳಿಸಿ, ಇಸ್ತ್ರಿ (ಐರನ್) ಮಾಡಿ ಕೈ ಚೀಲಗಳನ್ನಾಗಿ ಪರಿವರ್ತಿಸಿದ್ದಾರೆ.
ಪರಿಸರಸ್ನೇಹಿ ಚೀಲ: ಪ್ಲಾಸ್ಟಿಕ್ ಚೀಲಗಳ ಬಳಕೆಯ ಬದಲು ಕಷಾಯದ ಬಟ್ಟೆಗಳಿಂದ ತಯಾರಿಸಿದ ಈ ಕೈ ಚೀಲಗಳು ಗುಣಮಟ್ಟದಲ್ಲೂ ಉತ್ತಮವಾಗಿದ್ದು, ಮರುಬಳಕೆಗೆ ಯೋಗ್ಯವಾಗಿವೆ. ಸಂಜೀವಿನಿ ಒಕ್ಕೂಟ ಸಂಘದ ಮಹಿಳೆಯರು ತಯಾರಿಸಿದ ಬಟ್ಟೆಯ ಚೀಲಗಳನ್ನು ಮಂಗಳವಾರ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
Laxmi News 24×7