ಮೈಸೂರು: ಚಾಮರಾಜೇಂದ್ರ ಮೃಗಾಲಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಹುಲಿ ತಾಯಮ್ಮ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮುಂಜಾನೆ 3.45ರ ಸಮಯದಲ್ಲಿ ಅಸುನೀಗಿದೆ.
ಮೃಗಾಲಯದ ಸುಮಾರು 4 ವರ್ಷ 10 ತಿಂಗಳು ವಯಸ್ಸಿನ ತಾಯಮ್ಮ ಎಂಬ ಹೆಸರಿನ ಹೆಣ್ಣು ಹುಲಿಯನ್ನು 2014 ಮಾರ್ಚ್ 28ರಂದು ಬಂಡೀಪುರದಿಂದ ರಕ್ಷಿಸಿ ತರಲಾಗಿತ್ತು. ತಾಯಮ್ಮ ಹುಲಿಯು ಇತ್ತೀಚೆಗೆ ಆಹಾರವನ್ನು ತ್ಯಜಿಸಿ ರಕ್ತಕಣ (haemoprotozoa) ನಿಂದ ಬಳಲುತ್ತಿತ್ತು. ಹುಲಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಡಿ.17, 20 ಮತ್ತು 23ರಂದು ಮೃಗಾಲಯವು ಪ್ರಕಟಣೆಯ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿತ್ತು.
ಮುಂದುವರೆದ ಚಿಕಿತ್ಸೆಯ ನಡುವೆಯೂ ತಾಯಮ್ಮ ಹುಲಿಯ ಸ್ಥಿತಿಯು ಗಂಭೀರವಾಗಿದ್ದು, ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂದಿರಲಿಲ್ಲ. ಮೈಸೂರು ಮೃಗಾಲಯದ ಪಶುವೈದ್ಯರ ತಂಡವು ಹೆಚ್ಚಿನ ಪ್ರಯತ್ನದೊಂದಿಗೆ ಆರೈಕೆ ಮಾಡಿದಾಗ್ಯೂ ಸುಮಾರು 10 ದಿನಗಳಿಂದ ಈ ಹುಲಿಯು ಯಾವುದೇ ಆಹಾರ/ನೀರು ಸೇವಿಸದ ಕಾರಣ ಅದರ ಸ್ಥಿತಿಯು ಗಂಭೀರವಾಗಿತ್ತು.
ತಾಯಮ್ಮ ಹುಲಿಯು ಚಿಕಿತ್ಸೆಗೆ ಸ್ಪಂದಿಸದೆ ಡಿ.24ರ ಬೆಳಗಿನಜಾವ ಸುಮಾರು 3.45 ಗಂಟೆಗೆ ಸಾವನ್ನಪ್ಪಿದೆ. ಮೈಸೂರು ಮೃಗಾಲಯಕ್ಕೆ ತಾಯಮ್ಮ ಹುಲಿಯ ಸಾವು ಅಪಾರ ನಷ್ಟವನ್ನುಂಟುಮಾಡಿದೆ. ಮೃಗಾಲಯದ ಆಡಳಿತ ವರ್ಗ, ಪಶುವೈದ್ಯಕೀಯ ತಂಡ ಮತ್ತು ಪ್ರಾಣಿಪಾಲನಾ ತಂಡ ಹೆಣ್ಣು ಹುಲಿ ತಾಯಮ್ಮಳ ಸಾವಿಗೆ ತೀವ್ರ ಸಂತಾಪ ಸೂಚಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Laxmi News 24×7