ಯಾದಗಿರಿ: “ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸೂಕ್ತ ಸೌಲಭ್ಯಗಳಿಲ್ಲದೆ ಸಾಕಷ್ಟು ಕ್ರೀಡಾಪಟುಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ಮೂರುವರೆ ತಿಂಗಳಿಂದ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ, ಸಮಸ್ಯೆಗಳ ಕುರಿತು ಪತ್ರ ನೀಡಿದರೂ ಇದುವರೆಗೂ ಒಂದೂ ಉತ್ತರ ದೊರೆತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿರುವ ಖೇಲೋ ಇಂಡಿಯಾ ಖ್ಯಾತಿಯ ಕ್ರೀಡಾಪಟು ಲೋಕೇಶ್ ರಾಠೋಡ ಅವರು ಸೋಮವಾರ (ಇಂದು) ಜಿಲ್ಲಾ ಕ್ರೀಡಾಂಗಣದ ಎದುರು ತಾವು ಗೆದ್ದ ಪದಕಗಳನ್ನು ಮುಂದಿಟ್ಟು ಧರಣಿ ನಡೆಸಿದರು.
ಜಿಲ್ಲೆಯ ಕ್ರೀಡಾಪಟುವಾಗಿರುವ ಲೋಕೇಶ್ ರಾಠೋಡ, ಕಳೆದ ತಿಂಗಳು ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಖೇಲೋ ಇಂಡಿಯಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಮೂರನೇ ಸ್ಥಾನ ಗಳಿಸುವ ಮೂಲಕ ಗಮನ ಸೆಳೆದಿದ್ದರು. ಈವರೆಗೆ 50ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವ ಅವರು, ಅಥ್ಲೆಟಿಕ್ಸ್ನ ವಿವಿಧ ಸ್ಪರ್ಧೆಗಳಲ್ಲಿ ಕಂಚಿನ ಪದಕಗಳನ್ನೂ ಪಡೆದುಕೊಂಡಿದ್ದಾರೆ.
“ಜಿಲ್ಲಾ ಕ್ರೀಡಾಂಗಣದಲ್ಲಿ ತೀವ್ರ ಅವ್ಯವಸ್ಥೆ ಇರುವುದರಿಂದ ತರಬೇತಿಗೆ ಸೂಕ್ತ ವಾತಾವರಣವಿಲ್ಲ. 2025ರ ರಾಷ್ಟ್ರೀಯ ಡೆಕಾಥ್ಲಾನ್ ಸ್ಪರ್ಧೆಗೆ ತಯಾರಿ ನಡೆಸುವಾಗ ಸಮರ್ಪಕ ಸೌಲಭ್ಯಗಳ ಕೊರತೆಯಿಂದ ಬೆಂಗಳೂರಿಗೆ ಖರ್ಚು ಮಾಡಿ ಹೋಗಬೇಕಾದ ಅನಿವಾರ್ಯತೆ ಎದುರಾಯಿತು. ಈ ಕಾರಣದಿಂದ ಹಲವಾರು ಸ್ಪರ್ಧೆಗಳನ್ನು ತಪ್ಪಿಸಿಕೊಂಡಿದ್ದೇನೆ” ಎಂದು ಲೋಕೇಶ್ ನೋವು ತೋಡಿಕೊಂಡರು.
“ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದರೂ ಯಾದಗಿರಿ ಜಿಲ್ಲಾಡಳಿತದಿಂದ ಒಂದೇ ಒಂದು ಅಭಿನಂದನಾ ಕರೆಯೂ ಬಂದಿಲ್ಲ. ಐಪಿಎಲ್ನಂತಹ ಐಷಾರಾಮಿ ಕ್ರೀಡಾಕೂಟಗಳಿಗೆ ಅದ್ದೂರಿ ಸ್ವಾಗತ ನೀಡುವ ವ್ಯವಸ್ಥೆ ಇದೆ. ಗ್ರಾಮೀಣ ಭಾಗದ ಬಡ ಹಿನ್ನೆಲೆಯ ಕ್ರೀಡಾಪಟುಗಳು ಜಿಲ್ಲಾಡಳಿತ ಮತ್ತು ಸರ್ಕಾರದ ಕಣ್ಣಿಗೆ ಕಾಣುವುದಿಲ್ಲ” ಎಂದು ಅವರು ನೊಂದು ನುಡಿದರು.
Laxmi News 24×7