ಚಿಕ್ಕೋಡಿ: ನಮ್ಮನ್ನು ಯಾರಾದರೂ ದೆಹಲಿಗೆ ಕರೆದರೆ ನಾವು ಹೋಗುವುದಕ್ಕೆ ಸಿದ್ಧರಿದ್ದೇವೆ. ಆದರೆ ಯಾರಾದರೂ ಕರೆಯಬೇಕಲ್ಲವೇ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಚಿಕ್ಕೋಡಿ ಪಟ್ಟಣದಲ್ಲಿಂದು ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸ ಮಾಡುತ್ತಿದ್ದಾರೆ, ತಾವೂ ಹೋಗ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮನ್ನು ಕರೆದರೆ ನಾವು ರೆಡಿ ಇದ್ದೇವೆ, ಯಾರಾದ್ರೂ ಕರೆಯಬೇಕಲ್ಲವೇ? ಎಂದು ಕೇಳಿದರು.
ಇವತ್ತು ಚಿಕ್ಕೋಡಿ ನ್ಯಾಯಾಲಯದ ಕಟ್ಟಡ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮವಿತ್ತು. ಚಿಕ್ಕೋಡಿ ನ್ಯಾಯಾಲಯಕ್ಕೆ ಅಂಬೇಡ್ಕರ್ ಬಂದು ಹೋಗಿರುವ ಇತಿಹಾಸವಿದೆ. ಇದೊಂದು ಐತಿಹಾಸಿಕ ನ್ಯಾಯಾಲಯ. ಅದನ್ನು ಉದ್ಘಾಟನೆ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು.
ಬೆಳಗಾವಿಯಲ್ಲಿ ಡಿನ್ನರ್ ಮೀಟಿಂಗ್ ಮಾಡಿದ ವಿಚಾರವಾಗಿ ಮಾತನಾಡಿ, ಎಲ್ಲರೂ ಮಾಡಿದ್ರು, ನಾವೂ ಮಾಡಿದ್ವಿ. ಎಲ್ಲಾ ಪಾರ್ಟಿ, ಗ್ರೂಪ್ನವರು ಮಾಡಿದ್ದಾರೆ. ಅದರಂತೆ ನಾವೂ ಮಾಡಿದ್ದೇವೆ. ಅದೊಂದು ವಾಡಿಕೆ ಅಷ್ಟೇ ಎಂದು ಹೇಳಿದರು.
ಎಲ್ಲೋ ಒಂದು ಕಡೆ ಅಂಪೈರ್ ನೀವೇ ಎನ್ನುವ ಮಾತಿದೆ ಎಂದು ಪ್ರಶ್ನೆಗೆ, ನಮ್ಮಲ್ಲಿ ಏನಿಲ್ಲ, ಎಲ್ಲ ಹೈಕಮಾಂಡ್ ಕಡೆ ಇದೆ. ಅಂಪೈರ್ ದೆಹಲಿಯಲ್ಲಿದ್ದಾರೆ ಎಂದರು. ಡಿ.ಕೆ.ಶಿವಕುಮಾರ್ ನಾಳೆ ದೆಹಲಿ ಪ್ರವಾಸ ಮಾಡ್ತಿದ್ದಾರಾ? ಎಂಬುದಕ್ಕೆ, ನಮಗೇನೂ ಗೊತ್ತಿಲ್ಲ. ಅವರನ್ನೇ ಕೇಳಿ ಎಂದರು.
Laxmi News 24×7