ಹಾವೇರಿ: ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಗೊಟಗೋಡಿಯಲ್ಲಿರುವ ಜಾನಪದ ವಿಶ್ವವಿದ್ಯಾಲಯ ಈ ಬಾರಿ ಮೌಲ್ಯಮಾಪನ ಕುಲಸಚಿವ ಡಾ.ಕೆ.ಶಿವಶಂಕರ್ ರಾಜೀನಾಮೆ ಕುರಿತ ವಿಷಯಕ್ಕೆ ಸುದ್ದಿಯಲ್ಲಿದೆ.
ಶಿವಶಂಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ನವೆಂಬರ್ 24ರಂದು ನಡೆದಿದ್ದ ವಿವಿ ಸಿಂಡಿಕೇಟ್ ಸಭೆಯಲ್ಲಿ ಸದಸ್ಯರು ಮತ್ತು ಶಿವಶಂಕರ್ ನಡುವೆ ವಾಗ್ವಾದ ನಡೆದಿತ್ತು. ವಿವಿಯ ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ ವಿರುದ್ದ ಕ್ರಮ ಕೈಗೊಳ್ಳುವಂತೆ ಸಿಂಡಿಕೇಟ್ ಸದಸ್ಯರು ಶಿವಶಂಕರ್ ಜೊತೆ ವಾಗ್ವಾದ ನಡೆಸಿದ್ದರು. ಅಲ್ಲದೇ ಶಹಜಹಾನ್ ಮುದಕವಿ ದುರ್ನಡತೆಗೆ ಕಡಿವಾಣ ಹಾಕುವಂತೆ ಕುಲಸಚಿವ ಶಿವಶಂಕರ್ ಮತ್ತು ಕುಲಪತಿ ಭಾಸ್ಕರ್ ಅವರಿಗೆ ಮನವಿ ಸಲ್ಲಿಸಿದ್ದರು. ಇದರಿಂದ ನೊಂದಿದ್ದ ಶಿವಶಂಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವಿವಿ ಕುಲಪತಿ ಭಾಸ್ಕರ್ ಅವರಿಗೆ ಶಿವಶಂಕರ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿತ್ತು.ಆದರೆ, ಕುಲಪತಿ ಡಾ.ಭಾಸ್ಕರ್ ಅವರು ವದಂತಿಗಳಿಗೆ ಈಗ ತೆರೆ ಎಳೆದಿದ್ದಾರೆ. ಆಡಳಿತ ಕುಲಸಚಿವರಾಗಿ ಗುರುಪ್ರಸಾದ್ ಕಾರ್ಯನಿರ್ವಹಿಸುತ್ತಿದ್ದರು. ಅವರು ಮಾತೃಸಂಸ್ಥೆಗೆ ಮರಳಿದ ಹಿನ್ನೆಲೆಯಲ್ಲಿ ಅವರ ಹುದ್ದೆಯಲ್ಲಿ ವಿವಿಯ ಮೌಲ್ಯಮಾಪನ ಕುಲಸಚಿವ ಡಾ.ಕೆ.ಶಿವಶಂಕರ್ ಅವರಿಗೆ ಪ್ರಭಾರಿಯಾಗಿ ಮುಂದುವರೆಯಲು ನಾನೇ ಹೇಳಿದ್ದೆ ಎಂದು ತಿಳಿಸಿದ್ದಾರೆ.
Laxmi News 24×7