ಬೆಂಗಳೂರು: ರಾಜ್ಯದ ಅತಿದೊಡ್ಡ ಜೈಲಾಗಿರುವ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅವ್ಯಾಹತವಾಗಿ ಬಳಕೆಯಾಗುತ್ತಿದ್ದ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನ ವಶಕ್ಕೆ ಪಡೆದುಕೊಂಡಿದ್ದ ಜೈಲಧಿಕಾರಿಗಳು, ಇದೀಗ ಅಕ್ರಮವಾಗಿ ಬೀಡಿ ಹಾಗೂ ಸಿಗರೇಟ್ ಮಾರಾಟವನ್ನು ಬಂದ್ ಮಾಡಿರುವುದನ್ನು ವಿರೋಧಿಸಿ ಕಳೆದ ಮೂರು ದಿನಗಳಿಂದ ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಜೈಲಿನ ಕೈಪಿಡಿ ಅನುಸಾರ ಬೀಡಿ ಹಾಗೂ ಸಿಗರೇಟ್ ವ್ಯಾಪಾರ ಮಾಡುವುದು ಕಾನೂನುಬಾಹಿರ. ಜೈಲು ಸಿಬ್ಬಂದಿ ಅದಕ್ಷತೆ ಹಾಗೂ ಕುಮ್ಮಕ್ಕಿನಿಂದ ಬಂಧಿಗಳು ಅಕ್ರಮವಾಗಿ ನಿಷೇಧಿತ ವಸ್ತುಗಳನ್ನ ಮಾರಾಟ ಮಾಡುತ್ತಿದ್ದರು. ಇದನ್ನ ನಿಯಂತ್ರಿಸಲು 20 ಮಂದಿ ಅಧಿಕಾರಿ ಹಾಗೂ ಸಿಬ್ಭಂದಿ ಒಳಗೊಂಡ ವಿಶೇಷ ಶೋಧ ತಂಡ ರಚಿಸಿತ್ತು. ಈ ತಂಡವು ತಪಾಸಣೆ ನಡೆಸಿ 50ಕ್ಕಿಂತ ಹೆಚ್ಚು ಮೊಬೈಲ್ ಫೋನ್ಗಳನ್ನ ವಶಕ್ಕೆ ಪಡೆದುಕೊಂಡಿತ್ತು. ಅಲ್ಲದೇ ಜೈಲಿನೊಳಗೆ ಮಾರಾಟವಾಗುತ್ತಿದ್ದ ಬೀಡಿ ಹಾಗೂ ಸಿಗರೇಟ್ ಕಡಿವಾಣ ಹಾಕಿತ್ತು.
ಇದರಿಂದ ಅಸಮಾಧಾನಗೊಂಡಿರುವ ಕೈದಿಗಳು ಊಟ ತ್ಯಜಿಸಿ ಮೂರು ದಿನಗಳಿಂದ ಪ್ರತಿಭಟನೆಗೆ ಇಳಿದಿದ್ದಾರೆ. ಬಿಡಿ, ಸಿಗರೇಟ್ ಮಾರಾಟಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ಪರಪ್ಪನ ಅಗ್ರಹಾರ ಜೈಲಿನೊಳಗಿರುವ ಆಡಳಿತ ಕಚೇರಿ ಮುಂದೆ ಧರಣಿ ಮಾಡುತ್ತಿದ್ಧಾರೆ. ಈ ಬಗ್ಗೆ ಜೈಲಾಧಿಕಾರಿಗಳು ಜೈಲಿನ ನಿಯಾಮವಳಿ ಬಗ್ಗೆ ತಿಳಿ ಹೇಳಿದ್ದರೂ ಪಟ್ಟು ಹಿಡಿದು ಕುಳಿತಿದ್ಧಾರೆ.
Laxmi News 24×7