ಬೆಂಗಳೂರು : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಪ್ರದೇಶಗಳಲ್ಲಿನ ಭೂಪರಿವರ್ತಿತ ಜಮೀನುಗಳಲ್ಲಿ ಬಡಾವಣೆಗಳ ವಿನ್ಯಾಸ ಅನುಮೋದನೆಯ ಕುರಿತು ವಹಿಸಬೇಕಾದ ಕ್ರಮಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ಅದರಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025ರ ಪ್ರಕರಣ 199(ಬಿ)ರಲ್ಲಿ ಕಟ್ಟಡ ನಿರ್ಮಾಣ ಉದ್ದೇಶಗಳಿಗಾಗಿ ಇರುವ ಕಟ್ಟಡ ನಿವೇಶನಗಳಿಗಾಗಿ ಹೊಸ ಖಾತಾ ಅಥವಾ ಪಿ.ಐ.ಡಿ-ಯನ್ನು ನೀಡಲು, ಗ್ರಾಮ ಪಂಚಾಯತಿ ಅಥವಾ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಲಾದ ಪ್ರಾಧಿಕಾರಗಳು, ಅಧಿಕಾರ ವ್ಯಾಪ್ತಿಯ ಯೋಜನಾ ಪ್ರಾಧಿಕಾರದ ಮೂಲಕ ಬಡಾವಣೆ ನಕ್ಷೆಗಾಗಿ ಪೂರ್ವಾನುಮೋದನೆಯನ್ನು ಪಡೆದುಕೊಳ್ಳಬೇಕಾಗಿದೆ. ಬಡಾವಣೆ ಅಭಿವೃದ್ಧಿದಾರರು ನಮೂನೆ-1ರಲ್ಲಿ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯತ್ಗೆ ಸಲ್ಲಿಸಬೇಕಾಗಿದೆ.
ವಿನ್ಯಾಸ ನಕ್ಷೆಯ ಪ್ರಕಾರ, ಬಡಾವಣೆಯ ಮಾಲೀಕರು ಸಂಬಂಧಿಸಿದ ಗ್ರಾಮ ಪಂಚಾಯತ್ಗೆ ರಸ್ತೆಗಳ ಅಗಲೀಕರಣಕ್ಕೆ ಮೀಸಲಿರಿಸಿದ ರಸ್ತೆಗಳು ಸೇರಿದಂತೆ ರಸ್ತೆಗಳು, ಪಾರ್ಕ್ಗಳು, ವಾಹನ ನಿಲ್ದಾಣಗಳು, ನಾಗರೀಕ ಸೌಲಭ್ಯದ ಪ್ರದೇಶಗಳು, ಸಾರ್ವಜನಿಕ ಬಳಕೆಯ ಪ್ರದೇಶಗಳು ಹಾಗೂ ಇತರೆ ಮೂಲ ಸೌಕರ್ಯಗಳ ಪ್ರದೇಶಗಳನ್ನು ಉಚಿತವಾಗಿ ನೋಂದಾಯಿತ ಪರಿತ್ಯಾಜನ ಪತ್ರದ ಮುಖಾಂತರ ವರ್ಗಾಯಿಸಬೇಕಾಗುತ್ತದೆ.
ಬಡಾವಣೆಯ ಮಾಲೀಕರು, ವಿನಿಮಯ-11ರ ಪ್ರಕಾರ ಅನುಮೋದಿತ ಬಡಾವಣೆಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳಂತೆ ಸಂಬಂಧಿಸಿದ ಇಲಾಖೆಗಳಾದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಎಸ್ಕಾಂ ಹಾಗೂ ಅವಶ್ಯಕ ಇತರೆ ಇಲಾಖೆಗಳಿಂದ ಅನುಮೋದಿತ ವಿನ್ಯಾಸದಂತೆ ದೃಢೀಕೃತ ಅಂದಾಜು ಪಟ್ಟಿಗಳನ್ವಯ ಅನುಷ್ಠಾನ ಮಾಡಬೇಕು.
Laxmi News 24×7