ಸವದಿ ಬಿಜೆಪಿಯಲ್ಲಿದ್ದರೆ ದೊಡ್ಡ ಲೀಡರ್ ಆಗುತ್ತಿದ್ದ, ಆದರೀಗ ನಮ್ಮ ಪೀಡಾ ಹೋಗಿದೆ: ರಮೇಶ್ ಜಾರಕಿಹೊಳಿ
ಚಿಕ್ಕೋಡಿ, ಬೆಳಗಾವಿ : ನಾವು ಯಾವುದೋ ಒಂದು ಕಾರಣಕ್ಕಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ಲಕ್ಷ್ಮಣ್ ಸವದಿಗೆ ಹೆಚ್ಚಿನ ಲಾಭವಾಯಿತು. ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರಿಂದ ಬಿಜೆಪಿಯಿಂದ ಪೀಡಾ ಹೋಯಿತು. ಅದು ಕಾಂಗ್ರೆಸ್ ಪಾಲಾಗಿದೆ, ಬಿಜೆಪಿಯಲ್ಲಿ ಸವದಿ ಇದ್ದರೆ ರಾಜ್ಯದಲ್ಲಿ ಅತಿ ದೊಡ್ಡ ಲೀಡರ್ ಆಗುತ್ತಿದ್ದ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಅಥಣಿ ಪಟ್ಟಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಐದು ವರ್ಷ ಶಾಸಕರಾಗಿ ಕೆಲಸ ಮಾಡಬಹುದು. ಆದರೆ, ಬಿಜೆಪಿ ಬಿಟ್ಟು ಸವದಿ ತನ್ನ ವ್ಯಕ್ತಿತ್ವವನ್ನು ಹಾಳು ಮಾಡಿಕೊಂಡ, ಬಿಜೆಪಿ ಬಿಟ್ಟಿದ್ದು ಒಳ್ಳೆಯದಾಯ್ತು. ಇನ್ನು ಮುಂದೆ ಸವದಿ ಬಿಜೆಪಿ ಬರೋದಕ್ಕೆ ನಾವು ಆಸ್ಪದ ಕೊಡುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಬ್ಬರಿಸಿದ್ದಾರೆ.
ಕೃಷ್ಣಾ ಸಕ್ಕರೆ ಕಾರ್ಖಾನೆ ಸಂಘದ ಚುನಾವಣೆ ಹಿನ್ನೆಲೆ ಸ್ವಾಭಿಮಾನಿ ರೈತರ ಪೆನಲ್ಗೆ ಬೆಂಬಲ ಕೊಟ್ಟು ಅಥಣಿ ಪಟ್ಟಣದ ವೇದಿಕೆಯಲ್ಲಿ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ, ಶಾಸಕ ಲಕ್ಷ್ಮಣ್ ಸವದಿ ಬಿಜೆಪಿ ಮರಳಿ ಬರುವುದು ಅಷ್ಟೇನೂ ಸಲೀಸಿಲ್ಲ, ಮೊದಲಿಗಿಂತಲೂ ಈಗ ನಾವು ಬಿಜೆಪಿಯಲ್ಲಿ ಒಳ್ಳೆಯ ಸ್ಥಾನಮಾನ ಪಡೆದಿದ್ದೇವೆ. ಸವದಿ ಬಿಜೆಪಿಗೆ ಬರುವುದಾದರೆ ಅವನನ್ನು ಎಲ್ಲಿ ತಡೆಯಬೇಕು ಅಲ್ಲಿ ನಾವು ತಡೆಯುತ್ತೇವೆ, ಆ ಶಕ್ತಿಯು ಕೂಡ ನಮ್ಮಲ್ಲಿದೆ, ಇದನ್ನು ಮೀರಿ ಅವನು ಏನಾದರೂ ಪಕ್ಷಕ್ಕೆ ಬಂದರೆ ಮುಂದೆ ದೇವರಿದ್ದಾನೆ ನೋಡೋಣ ಎಂದರು.
ಅವಕಾಶ ಸಿಕ್ಕರೆ ಪಂಚಾಯಿತಿ ಅಧ್ಯಕ್ಷಗಿರಿಯಿಂದಲೂ ಹಿಂದೆ ಸರಿಯಲ್ಲ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗುವುದಕ್ಕೆ ಆಸೆ ವ್ಯಕ್ತಪಡಿಸಿಲ್ಲ ಎಂದು ಶಾಸಕ ಸವದಿ ಹೇಳುತ್ತಾರೆ, ಆದರೆ ಸವದಿಗೆ ಅವಕಾಶ ಸಿಕ್ಕರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಗೋಕೂ ಹಿಂದೆ ಸರಿಯುವುದಿಲ್ಲ. ಬಿಡಿಸಿಸಿ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂದರೆ ಜಾರಕಿಹೊಳಿ ಮನೆಗೆ ಬಂದು ಕಾಲಿಗೆ ಬಿದ್ದು ( ನಮಸ್ಕಾರ) ಇಲ್ಲೇ ಕೋರುತ್ತಾನೆ ಎಂದು ಲೇವಡಿ ಮಾಡಿದರು.
ಮೊನ್ನೆ ಡಿಕೆ ಶಿವಕುಮಾರ್ ಮನೆಯಲ್ಲಿ ನಾನೇ ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುತ್ತೇನೆ ಎಂದು ಹೇಳಿದ್ದಾನೆ. ಅಥಣಿಯಲ್ಲಿ ಕುಳಿತು ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳುತ್ತಾನೆ. ಅವಕಾಶ ಸಿಕ್ಕರೆ ಜಿಗಿದು ಬರುತ್ತಾರೆ. ಲಕ್ಷ್ಮಣ್ ಸವದಿ ಮಾತು ಕೇಳಿ ರಾಜ್ಯದಲ್ಲಿ ಇಬ್ಬರು ಪ್ರಮುಖ ನಾಯಕರು ಹಾಳಾಗಿದ್ದಾರೆ, ಅಣ್ಣಾಸಾಬ್ ಜೊಲ್ಲೆ ಸಂಸದ ಸ್ಥಾನವನ್ನು ಕಳೆದುಕೊಂಡರು, ರಮೇಶ್ ಕತ್ತಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಕಳೆದುಕೊಂಡರು. ಸದ್ಯ ಸವದಿ ಮಾತು ಕೇಳಿಕೊಂಡು ಇವರಿಬ್ಬರು ಹುಚ್ಚರಾಗಿದ್ದಾರೆ ಎಂದರು
Laxmi News 24×7