ಬೆಂಗಳೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲಿನ ದಾಳಿಯನ್ನು ಖಂಡಿಸಿ ರಾಜ್ಯ ಹೈಕೋರ್ಟ್ ಮುಂದೆ ವಕೀಲರು ಪ್ರತಿಭಟನೆ ನಡೆಸಿದರು. ದಾಳಿ ಮಾಡಿದ ವಕೀಲ ರಾಕೇಶ್ ಕಿಶೋರ್ ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ಇದು ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಗುರಿಯೊಂದಿಗೆ ನಡೆಸಿರುವ ಅತಿ ದೊಡ್ಡ ಪಿತೂರಿ, ಈ ಕುರಿತು ಸಂಪೂರ್ಣ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಭಾಗಿಯಾದ ವಕೀಲರೊಬ್ಬರು ಮಾತನಾಡಿ, ಈ ದಾಳಿಯು ಭಾರತದ ನ್ಯಾಯಾಂಗ ಮತ್ತು ಸಾಂವಿಧಾನಿಕ ವ್ಯವಸ್ಥೆ ಮೇಲೆ ನಡೆಸಿದ ದಾಳಿಯಾಗಿದೆ. ಕಿಶೋರ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿ, ಎನ್ಐಎ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ವಕೀಲರಾದ ಎಸ್ ಬಾಲನ್ ಮಾತನಾಡಿ, ಇದು ಜಾತಿ ಪೂರ್ವಗ್ರಹದಲ್ಲಿನ ಆಳವಾದ ಅಪಾಯಕಾರಿ ಮನಸ್ಥಿತಿಯನ್ನು ಬಿಂಬಿಸುತ್ತದೆ. ಇದು ಧರ್ಮದ ಕುರಿತಾಗಿ ಅಲ್ಲ, ಇದು ಅತ್ಯುನ್ನತ ನ್ಯಾಯಾಂಗ ಹುದ್ದೆಯನ್ನು ಹೊಂದಿರುವ ದಲಿತನ ಮೇಲಿನ ದ್ವೇಷದ ಬಗ್ಗೆ ಆಗಿದೆ. ಇಂತಹ ಬೆದರಿಕೆಯನ್ನು ನಿಯಂತ್ರಿಸದಿದ್ದರೆ, ನ್ಯಾಯದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ನಾಶವಾಗುತ್ತದೆ ಎಂದು ತಿಳಿಸಿದರು.
ನ್ಯಾಯಮೂರ್ತಿ ಗವಾಯಿ ಅವರು ಸನಾತನ ಧರ್ಮವನ್ನು ಅವಮಾನಿಸಿದ್ದಾರೆ ಎಂದು ದಾಳಿಯನ್ನು ವಕೀಲ ರಾಕೇಶ್ ಸಮರ್ಥಿಸಿಕೊಂಡಿದ್ದರೆ ಎಂಬ ವರದಿ ಕುರಿತು ಮಾತನಾಡಿರುವ ವಕೀಲ ದ್ವಾರಕನಾಥ್, ಇದು ಆಧಾರ ರಹಿತ ಮತ್ತು ಕಟ್ಟುಕಥೆ. ಸಿಜೆಐ ಸನಾತನ ಸಂಸ್ಥೆಯನ್ನು ಅವಮಾನಿಸಿದ್ದಾರೆ ಎಂಬ ಹೇಳಿಕೆಯು ಮೂಲಭೂತವಾದಿಗಳು ವಿಭಜನೆ ಮಾಡಲು ಬಳಸಿರುವ ನೆಪವಾಗಿದೆ.
Laxmi News 24×7