ನವದೆಹಲಿ,ಡಿ.23- ರೈತರ ದಿನಾಚರಣೆಯ ಹಿನ್ನೆಲೆಯಲ್ಲಿ ಭಾರತದ 5ನೇ ಪ್ರಧಾನಮಂತ್ರಿಯಾಗಿದ್ದ ಚರಣ್ಸಿಂಗ್ ಚೌಧರಿ ಅವರನ್ನು ಸ್ಮರಿಸಿರುವ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ಚೌಧರಿ ಅವರಿಂದ ಪ್ರಭಾವಿತ(ಸ್ಪೂರ್ತಿ)ರಾಗಿರುವ ಪ್ರಧಾನಿ ನರೇಂದ್ರಮೋದಿ ಅವರು ಎಂದಿಗೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಇಂದು ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್, ರೈತ ನಾಯಕ ಹಾಗೂ ಮಾಜಿ ಪ್ರಧಾನಿ ಚರಣ್ ಸಿಂಗ್ ಚೌಧರಿ ಅವರು ತಮ್ಮ ಜೀವಾತವಧಿಯವರೆಗೂ ರೈತರ ಪರ ಧ್ವನಿ ಎತ್ತಿದ್ದರು. ಕೃಷಿಕರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡಿದ್ದರು. ಇಂದು ಅವರ ಜನ್ಮದಿನವಾಗಿದ್ದು, ರಾಷ್ಟ್ರೀಯ ಕೃಷಿ ದಿನಾಚರಣೆ ಆಚರಿಸಲಾಗುತ್ತಿದೆ. ದೇಶ ಸದಾ ಅವರ ಸೇವೆ ಹಾಗೂ ಕೊಡುಗೆಯನ್ನು ಸ್ಮರಿಸುತ್ತದೆ ಎಂದಿದ್ದಾರೆ.ದೇಶದ ಅನ್ನದಾತರ ಆದಾಯ ಹೆಚ್ಚಾಗಬೇಕು, ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವಂತಾಗಬೇಕು, ರೈತರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಚೌಧರಿ ಅವರು ಇಂಗಿತ ಹೊಂದಿದ್ದರು. ಈ ಸುಸಂದರ್ಭದಲ್ಲಿ ಪ್ರಸ್ತುತ ರೈತರಲ್ಲಿ ಉಂಟಾಗಿರುವ ಆತಂಕ ದೂರವಾಗಲಿದೆ ಎಂದು ಭರವಸೆ ನೀಡಿದರು.