ಕುಡಿದ ಮತ್ತಿನಲ್ಲಿ ಬೈಕ್ ಅಡ್ಡಗಟ್ಟಿ ಹಣ ಸುಲಿಗೆಗೆ ಯತ್ನ: ಯುವಕನನ್ನ ಚಾಕುವಿನಿಂದ ಇರಿದು ಹತ್ಯೆ: ಮೂವರ ಬಂಧನ
ಬೆಂಗಳೂರು: ಬೈಕ್ ನಲ್ಲಿ ತೆರಳುತ್ತಿದ್ದ ಯುವಕನನ್ನ ಕುಡಿದ ಮತ್ತಿನಲ್ಲಿ ಹಣಕ್ಕಾಗಿ ಅಡಗಟ್ಟಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನ ಬ್ಯಾಡರಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರೇಮ್ ಹತ್ಯೆಗೊಳಗಾದ ಯುವಕ. ಈತನ ಪೋಷಕರು ನೀಡಿದ ದೂರಿನ ಮೇರೆಗೆ ವಿಶಾಲ್, ಹೇಮಂತ್ ಹಾಗೂ ಪುನೀತ್ ಎಂಬುವರನ್ನ ಬಂಧಿಸಲಾಗಿದೆ. ಬಂಧಿತರ ಪೈಕಿ ವಿಶಾಲ್ ಬ್ಯಾಡರಹಳ್ಳಿ ಠಾಣೆಯ ರೌಡಿಶೀಟರ್ ಆಗಿದ್ದಾನೆ. ಕೃತ್ಯದಲ್ಲಿ ಮತ್ತೋರ್ವ ರೌಡಿಶೀಟರ್ ನವೀನ್ ಎಂಬಾತ ಭಾಗಿಯಾಗಿ ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ: ಭಾನುವಾರ ರಾತ್ರಿ ಬ್ಯಾಡರಹಳ್ಳಿಯ ತಿಗಳರಪಾಳ್ಯ ಮುಖ್ಯರಸ್ತೆಯಲ್ಲಿ ದುರ್ಘಟನೆ ನಡೆದಿದೆ. ಇಬ್ಬರು ಸ್ನೇಹಿತರೊಂದಿಗೆ ಪ್ರೇಮ್ ಬರುತ್ತಿದ್ದಾಗ ಆರೋಪಿಗಳ ಗುಂಪು ಅಡ್ಡಗಟ್ಟಿದೆ. ಹಣ ನೀಡುವಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಸಿದೆ. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಆರೋಪಿಗಳ ಬಳಿಯಿದ್ದ ಚಾಕುವಿನಿಂದ ಪ್ರೇಮ್ ನನ್ನ ಚುಚ್ಚಿ ಪರಾರಿಯಾಗಿದೆ ಎಂದು ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ತಿಳಿಸಿದ್ದಾರೆ.
ರಕ್ತಸ್ರಾವದಿಂದ ಬಳಲುತ್ತಿದ್ದ ಪ್ರೇಮ್ ನನ್ನ ಸ್ನೇಹಿತನೊಬ್ಬ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದ. ಹೆಚ್ಚಿನ ಚಿಕಿತ್ಸೆಗಾಗಿ ಆಡ್ಮಿಟ್ ಮಾಡುವಂತೆ ವೈದ್ಯರು ಸೂಚಿಸಿದ್ದರು. ಹಣವಿಲ್ಲದಿದ್ದರಿಂದ ವಾಪಸ್ ಕರೆತಂದು ಕೆಲ ಹೊತ್ತಾದ ಬಳಿಕ ಪ್ರೇಮ್ ಮೃತಪಟ್ಟಿದ್ಧಾನೆ. ಹತ್ಯೆಗೊಳಗಾದ ಪ್ರೇಮ್ ಕಾರ್ ಸರ್ವೀಸ್ ಸೆಂಟರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನ ಪೋಷಕರು ನೀಡಿದ ದೂರು ಆಧರಿಸಿ ಹತ್ಯೆ ಪ್ರಕರಣ ದಾಖಲಿಸಿ ಮೂವರನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Laxmi News 24×7