ಬೆಳಗಾವಿ: ಬೆಳಗಾವಿಯ ಮಕ್ಕಳ ರಕ್ಷಣಾ ಘಟಕದಲ್ಲಿ ಆಶ್ರಯ ಪಡೆದಿದ್ದ ಬಾಲ್ಯ ವಿವಾಹಕ್ಕೆ ಒಳಗಾಗಿದ್ದ ಬಾಲಕಿಯನ್ನು ಆರೋಪಿಯೇ ಅಪಹರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ನಡೆದ ಐದು ದಿನಗಳ ಬಳಿಕ ಬಾಲಕಿಯನ್ನು ರಕ್ಷಿಸಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗೋಕಾಕ್ ತಾಲೂಕಿನ ಗ್ರಾಮವೊಂದರ 13 ವರ್ಷದ ಬಾಲಕಿಗೆ ಮದುವೆ ಆಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಬಾಲಕಿಯನ್ನು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ರಕ್ಷಿಸಿದ್ದರು. ಬಳಿಕ ಜುಲೈ 25ರಂದು “ಸೃಷ್ಟಿ ಹೆಣ್ಣುಮಕ್ಕಳ ತೆರೆದ ತಂಗುದಾಣ”ದಲ್ಲಿ ಬಾಲಕಿಗೆ ಆಶ್ರಯ ನೀಡಲಾಗಿತ್ತು. ಆದರೆ, ಜುಲೈ 31ರಂದು ಏಕಾಏಕಿ ಆರೋಪಿ ಮಾತ್ರೆ ಕೊಡುವ ನೆಪದಲ್ಲಿ ಕೇಂದ್ರಕ್ಕೆ ಬಂದು ಅಲ್ಲಿನ ಸಿಬ್ಬಂದಿಗಳನ್ನು ಹೆದರಿಸಿ ಬಾಲಕಿ ಅಪಹರಿಸಿಕೊಂಡು ಹೋಗಿದ್ದ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳಿದ್ದಿಷ್ಟು: ಘಟನೆ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್.ಚೇತನ್ಕುಮಾರ್ ಈಟಿವಿ ಭಾರತ ಪ್ರತಿನಿಧಿ ಜತೆ ಮಾತನಾಡಿದ್ದಾರೆ. ಆರೋಪಿ ಚಂದ್ರಕಾಂತ ದಶರಥ ಲಗವೆ ಜುಲೈ 31ರಂದು ಬಾಲಕಿ ಇದ್ದ “ಸೃಷ್ಟಿ ಹೆಣ್ಣುಮಕ್ಕಳ ತೆರೆದ ತಂಗುದಾಣ”ಕ್ಕೆ ಬಂದಿದ್ದ. ನಾನು ಬಾಲಕಿಯ ಚಿಕ್ಕಪ್ಪ, ಆಕೆಗೆ ಮಾತ್ರೆಗಳನ್ನು ಕೊಡಬೇಕಿದೆ ಎಂದು ಸುಳ್ಳು ಹೇಳಿ ಕೇಂದ್ರದ ಬಾಗಿಲು ತೆರೆಸಿ ಒಳಗೆ ನುಗ್ಗಿದ್ದ. ಸಿಬ್ಬಂದಿಗೆ ಚಾಕು ತೋರಿಸಿ ಹೆದರಿಸಿ ಬಾಲಕಿಯನ್ನು ಬೈಕ್ ಮೇಲೆ ಹತ್ತಿಸಿಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಅವತ್ತೆ ರಾತ್ರಿ ಕೇಂದ್ರದ ಸಿಬ್ಬಂದಿ ಜುಲೈ 31ರಂದು ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು. ಇಂದು ಆರೋಪಿ ಬಂಧಿಸಿ, ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ಹೇಳಿದರು.
ಪ್ರಕರಣದ ಬಗ್ಗೆ ಪೊಲೀಸ್ ಆಯುಕ್ತರ ಪ್ರತಿಕ್ರಿಯೆ ಹೀಗಿದೆ: ಈ ಬಗ್ಗೆ ಮಾಧ್ಯಮಗಳಿಗೆ ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೊರಸೆ ಪ್ರತಿಕ್ರಿಯಿಸಿದ್ದಾರೆ. ಪೋಕ್ಸೋ ಪ್ರಕರಣದಲ್ಲಿ ರಕ್ಷಿಸಿದ್ದ ಬಾಲಕಿಯನ್ನು ಆರೋಪಿ ಅಪಹರಣ ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಇಂದು ಸೋಮವಾರ ಆರೋಪಿಯನ್ನು ನಮ್ಮ ಪೊಲೀಸರು ಬಂಧಿಸಿ, ಬಾಲಕಿಯನ್ನು ರಕ್ಷಿಸಿದ್ದಾರೆ. ಹೆಣ್ಣುಮಕ್ಕಳ ರಕ್ಷಣೆಗೆ ಇರುವ ಇಂಥ ಕೇಂದ್ರಗಳಲ್ಲಿ ಬಹುತೇಕ ಮಹಿಳೆಯರೇ ಇರುತ್ತಾರೆ. ಹಾಗಾಗಿ, ಅವರನ್ನು ಹೆದರಿಸಿ ಬಾಲಕಿಯನ್ನು ಅಪಹರಣ ಮಾಡಲಾಗಿದೆ. ಇನ್ಮುಂದೆ ಇಂಥ ಕೇಂದ್ರಗಳಲ್ಲಿ ಹೆಚ್ಚಿನ ಭದ್ರತೆ ನೀಡಲಾಗುತ್ತದೆ ಎಂದರು.
Laxmi News 24×7