ಬೆಂಗಳೂರು: “ನಾನು ಸಿಎಂ ಮೇಲೆ, ಮಂತ್ರಿಗಳ ಮೇಲೆ ಆರೋಪ ಮಾಡಿಲ್ಲ. ಈ ವ್ಯವಸ್ಥೆಯ ಬಗ್ಗೆ ಆರೋಪ ಮಾಡಿದ್ದೇನೆ. ವ್ಯವಸ್ಥೆಯ ಬಗ್ಗೆ ನನಗೆ ಅಸಮಾಧಾನವಿದೆ. ನಾನು ಮಾಡಿದ ಆರೋಪಕ್ಕೆ ಈಗಲೂ ಬದ್ಧ” ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಸ್ಪಷ್ಟನೆ ನೀಡಿದ್ದಾರೆ.
ಶಾಸಕರ ಭವದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ವ್ಯವಸ್ಥೆ ಸುಧಾರಣೆ ಆಗಬೇಕು. ನಮ್ಮ ಸರ್ಕಾರದ ಆಡಳಿತ ಚುರುಕಾಗಬೇಕು. ನನ್ನ ಕ್ಷೇತ್ರದಲ್ಲಿ ಸಮುದಾಯದ ಭವನ, ಸಿಸಿ ರಸ್ತೆ ಮಾಡಲು ಅವಕಾಶ ಸಿಗುತ್ತಿಲ್ಲ. ನಮಗೆ ಅಧಿಕಾರಿಗಳು ಸ್ಪಂದನೆ ಕೊಡುತ್ತಿಲ್ಲ. ನನ್ನ ಮತ ಕ್ಷೇತ್ರದಲ್ಲಿ 8,9ನೇ ತರಗತಿ ತೆಗೆದುಕೊಳ್ಳಲು ಆಗುತ್ತಿಲ್ಲ. ಇದು ನನ್ನ ಅಸಮಾಧಾನ” ಎಂದರು.
“ವಾರದಲ್ಲಿ ಒಂದು ದಿನವಾದರೂ ಸಿಎಂ, ಮಂತ್ರಿಗಳು ಶಾಸಕರಿಗೆ ಸಿಗಬೇಕು. ನಾನು ಶಾಸಕಾಂಗ ಸಭೆಯಲ್ಲಿ ನನ್ನ ನೋವು ತೋಡಿಕೊಂಡೆ. ಇದೂವರೆಗೂ ಸಿಎಂ, ಮಂತ್ರಿಗಳು ನನಗೆ ಸಮಸ್ಯೆ ಏನು ಅಂತ ಕೇಳಿಲ್ಲ. ಹಣ ಕೊಟ್ಟಿಲ್ಲ. ಈಗ ನನ್ನನ್ನು ಮುಖ್ಯಮಂತ್ರಿಗಳು ಕರೆದರೆ ಹೋಗಿ ಮಾತನಾಡುತ್ತೇನೆ. ನಾನು ಸೀನಿಯರ್ ಇದ್ದೇನೆ. 30 ವರ್ಷದಿಂದ ಶಾಸಕನಾಗಿ ಕರ್ತವ್ಯ ವಹಿಸಿದ್ದೇನೆ. ಮುಖ್ಯಮಂತ್ರಿಗಳು ನಮಗೆ ಸಮಸ್ಯೆ ಹೇಳಿಕೊಳ್ಳಲು ಅವಕಾಶ ಕೊಟ್ಟರೆ ಹೇಳುತ್ತೇನೆ” ಎಂದು ತಿಳಿಸಿದರು.
“ಐಎಎಸ್ ಅಧಿಕಾರಿಯೊಬ್ಬರು ನನಗೆ ಅವಮಾನ ಮಾಡಿದರು. ಅವರ ಮೇಲೆ ದೂರು ಕೊಟ್ಟರೂ ಕ್ರಮ ಆಗಿಲ್ಲ. ಶಾಸಕರಿಗಿಂತ ಅಧಿಕಾರಿ ಹೆಚ್ಚಾಯ್ತಾ ಇವರಿಗೆ?. ಹಕ್ಕುಚ್ಯುತಿ ಕೊಟ್ಟರೂ ಕ್ರಮ ಆಗಿಲ್ಲ ಅಂದರೆ ಏನು?” ಎಂದು ಪ್ರಶ್ನಿಸಿದರು.
“ಸಚಿವರು ಫೈಲ್ 4 ದಿನಗಳಲ್ಲಿ ಕ್ಲಿಯರ್ ಆಗಬೇಕು ಅಂತ ಆದೇಶ ಮಾಡಿ. ಸಚಿವರು ಅಧಿಕಾರಿಗಳಿಗೆ ಸೂಚನೆ ಕೊಡಬೇಕು. ಆಡಳಿತ ಯಂತ್ರ ಚುರುಕಾಗಬೇಕು. ಶಾಸಕರು ಹಾಗೂ ಜನರ ಕೆಲಸ ಆಗಬೇಕು. ಸಚಿವರು ಕೈಗೆ ಸಿಗಬೇಕು. ಅನುದಾನ ಕೊಟ್ಟಿದ್ದಾರೆ. ಆದರೆ ಸರಿಯಾಗಿ ಬಳಕೆ ಆಗುತ್ತಿಲ್ಲ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳಿಗೆ ಬಸವೇಶ್ವರ ನೀರಾವರಿ ಯೋಜನೆ ಬಗ್ಗೆ ಹತ್ತು ಬಾರಿ ಹೇಳಿದ್ದೇನೆ. ಏನೂ ಕ್ರಮ ಆಗಿಲ್ಲ. ನಮಸ್ಕಾರ ಮಾಡಿದ್ರೆ ಮಂತ್ರಿಗಳು ನಮಗೆ ನಮಸ್ಕಾರ ಮಾಡುವುದಿಲ್ಲ. ನಮ್ಮ ಪತ್ರ ಸರಿಯಾಗಿ ನೋಡುವುದಿಲ್ಲ. ಶಾಸಕರಿಗೆ ಬೆಲೆ ಕೊಡದೇ ಮಂತ್ರಿಗಳು ಹೋಗುತ್ತಾರೆ. ಯಾವ ಪುರುಷಾರ್ಥಕ್ಕೆ ನಾವು ಶಾಸಕರಾಗಿರಬೇಕು?” ಎಂದು ಆಕ್ರೋಶ ವ್ಯಕ್ತಪಡಿಸಿದರು.
Laxmi News 24×7